ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ವಿರುದ್ಧ ಪರಿಸರ ನಿಯಮ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ. ಗುಂಡ್ಲುಪೇಟೆಯ ಜಕ್ಕಳ್ಳಿಯ ಸರ್ವೇ ನಂಬರ್ 105ರಲ್ಲಿ 1.24 ಗುಂಟೆ ಜಮೀನು ಖರೀದಿಸಿದ್ದಾರೆ. ಇಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಬಂಡೀಪುರ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಇದು ಬರಲಿದೆ. ಇಲ್ಲಿನ ಮಾನಿಟರಿಂಗ್ ಸಮಿತಿಯಿಂದ ತಾತ್ಕಾಲಿಕ ವಾಸದ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ಆದರೆ, ಇದೀಗ ಅಲ್ಲಿ ಶಾಶ್ವತ ವಾಸದ ಮನೆ ನಿರ್ಮಾಣ ಕಾರ್ಯ ಭರ್ಜರಿಯಾಗಿ ಸಾಗಿದೆಯಂತೆ. ಸೂಕ್ಷ್ಮ ಪರಿಸರ ವಲಯದಲ್ಲಿ ಸುಪ್ರೀಂ ಕೋರ್ಟಿನ 2022ರ ಆದೇಶದ ಪ್ರಕಾರ ಶಾಶ್ವತ ಮನೆ ನಿರ್ಮಿಸುವಂತಿಲ್ಲ.
ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಪರವಾನಿಗೆ ಪಡೆದು ಶಾಶ್ವತ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದು ಪರಿಸರ ವಲಯ ನಿರ್ವಹಣಾ ಸಮಿತಿಯ ಷರತ್ತು ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ನಟ ಗಣೇಶ್ ಏನು ಉತ್ತರ ನೀಡುತ್ತಾರೆ ಅನ್ನೋದು ಕಾದು ನೋಡಬೇಕಿದೆ.