ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬರಿಗೆ ಕೆಲ ದುಷ್ಕರ್ಮಿಗಳು ಮನಬಂದಂತೆ ಥಳಿಸಿ, ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಹೇಳುತ್ತಿದ್ದಾಳೆ.
ಇಂತಹ ನೀಚ ಕೃತ್ಯ ಕುಂದಾನಗರಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಹಿಳೆಯ ಮನೆಗೆ ಬಂದ 30ಕ್ಕೂ ಹೆಚ್ಚು ಜನರು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಾನು ಎಲ್ಲಿಂದ ಕೊಡಲಿ ಎಂದಿದ್ದಕ್ಕೆ ಹೊಡೆದು, ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿದ್ದಾರೆ ಎಂದು ಹೇಳಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನಲೆ ಏನು?:
ದೌರ್ಜನ್ಯಕ್ಕೊಳಗಾದ ಮಹಿಳೆ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಅಧಿಕಾರಿಯೊಬ್ಬರಿಗೆ ಮಹಿಳೆ ಕಿರುಕುಳ ಕೊಟ್ಟಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಂತೆ. ಇನ್ನು ಮಹಿಳೆ ಹೇಳುವ ಪ್ರಕಾರ, ಸಂಘಟನೆಯೊಂದರ ಕೆಲ ಸದಸ್ಯರು ಕಳೆದ ತಿಂಗಳು 30ರಂದು ನನ್ನ ಬಳಿ ಬಂದು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಗಡಿಪಾರು ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ನಾನು ಭಿಕ್ಷೆ ಬೇಡಿಕೊಂಡು ಜೀವನ ಮಾಡುತ್ತೇನೆ. ನಾನೆಲ್ಲಿಂದ ತರಲಿ ಎಂದು ಹೇಳಿದ್ದೆ ಎಂದು ಹೇಳುತ್ತಿದ್ದಾಳೆ.
ಇಲ್ಲಿ ವಿಚಾರ ಏನೇ ಇರಲಿ ಓರ್ವ ಮಹಿಳೆ ಮೇಲೆ ಮನಬಂದಂತೆ ಥಳಿಸಿದ್ದಲ್ಲದೆ ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದು ಮಾತ್ರ ಅತ್ಯಂತ ಹೀನಕೃತ್ಯ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.