ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಬಿಜೆಪಿ ಪಾಲಿಗೆ ಬಹುದೊಡ್ಡ ಶತ್ರು ಆಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅವರನ್ನು ಸೈಡ್ ಲೈನ್ ಮಾಡಿದಷ್ಟು ಪಕ್ಷ, ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಪಜೀತಿ ತರುತ್ತಿದ್ದಾರೆ.
ಕೋವಿಡ್ ಕಾಲದಲ್ಲಿ ಬಿಜೆಪಿ ಸರ್ಕಾರ 40 ಸಾವಿರ ಕೋಟಿ ಅಕ್ರಮವೆಸಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಇದನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಂಡು, ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಹಲವು ಪ್ರಶ್ನೆಗಳನ್ನು ಕೇಳಿದೆ.
ಹೆಣದಲ್ಲಿ ಹಣ ಮಾಡಿದ ಹಿಂದಿನ ಬಿಜೆಪಿ ಸರ್ಕಾರ ಒಬ್ಬೊಬ್ಬ ಸೋಂಕಿತನಿಂದ 8-10 ಲಕ್ಷ ರೂಪಾಯಿ ಬಿಲ್ ತೋರಿಸಿದೆ ಎಂಬ ಸಂಗತಿ ಬಿಜೆಪಿಗರಿಂದಲೇ ಬಯಲಾಗಿದೆ. ವಿಜಯೇಂದ್ರ ಅವರೇ, ನಿಜವಾಗಿಯೂ ಒಬ್ಬ ಸೋಂಕಿತನಿಗೆ ಇಷ್ಟು ಖರ್ಚಾಗುತ್ತದೆಯೇ? ರಾಜ್ಯದ ಜನತೆಗೆ ಕರೋನಾದಿಂದ ಭಯಭೀತರಾಗಿದ್ದಾಗ ತಾವು ಲೂಟಿಯಲ್ಲಿ ಮಗ್ನರಾಗಿದ್ದಿರಾ? ಮಾತಾಡಿ ವಿಜಯೇಂದ್ರ ಮಾತಾಡಿ ಎಂದು ಪ್ರಶ್ನಿಸಿದೆ.
ಇನ್ನು 40 ಸಾವಿರ ಕೋಟಿ ಹಗರಣದಲ್ಲಿ ದೆಹಲಿ ನಾಯಕರಿಗೆ ಪಾಲೆಷ್ಟು? ರಾಜ್ಯ ನಾಯಕರ ಪಾಲೆಷ್ಟು? ಮಾಲ್ಡಿವ್ಸ್ ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಪಾಲುದಾರರು ಯಾರಿದ್ದಾರೆ? ಅಮೆರಿಕಾದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್ ಗಳೆಷ್ಟು? ದುಬೈನಲ್ಲಿ ಮಾಡಿದ ಆಸ್ತಿಯೆಷ್ಟು ಎಂದು ಪ್ರಶ್ನೆಗಳ ಸುರಿಮಳೆ ಸುರಿಸುವ ಮೂಲಕ ಬಿಜೆಪಿಯನ್ನು ಬೆಂಡೆತ್ತಿದೆ. ಯತ್ನಾಳ ಹೇಳಿಕೆಯಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ.