ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಕರ್ನಾಟಕ್ಕೆ ಸರಣಿ ಭೇಟಿ ನೀಡುತ್ತಿದ್ದಾರೆ. ವಾರ ಕಳೆಯುವುದರೊಳಗೆ ಒಂದೊಂದು ಜಿಲ್ಲೆಗೆ ಭೇಟಿ ನೀಡಿ ಬಿಜೆಪಿ ಸಮಾವೇಶದಲ್ಲಿ ಭಾಗಿಸುವ ಮೂಲಕ ಮತ ಪ್ರಚಾರ ನಡೆಸಿದ್ದಾರೆ. ಮಾರ್ಚ್ 12ರಂದು ಮಂಡ್ಯ, ಧಾರವಾಡಕ್ಕೆ ಭೇಟಿ ನೀಡಿದ್ದರು.
ಈಗ ಮಾರ್ಚ್ 25ಕ್ಕೆ ದಾವಣಗೆರೆಗೆ ಬರುತ್ತಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂದು ಸಮಾಪ್ತಿಗೊಳ್ಳುತ್ತಿದ್ದು, ಇದರಲ್ಲಿ ಭಾಗಿಯಾಗುತ್ತಿದ್ದಾರೆ. ನಗರದ ಹಳೆ ಪಿಬಿ ರಸ್ತೆಯ ಹತ್ತಿರ 400 ಎಕರೆ ವಿಸ್ತೀರ್ಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
ಹೀಗೆ ಚುನಾವಣೆ ದೃಷ್ಟಿಯಿಂದ ಮೇಲಿಂದ ಮೇಲೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ವಿಪಕ್ಷಗಳು, ಸಾರ್ವಜನಿಕರು ಆಕ್ರೋಶದ ಜೊತೆಗೆ ವ್ಯಂಗ್ಯವಾಡುತ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿಯೂ ಒಮ್ಮೆಯೂ ಭೇಟಿ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಭೇಟಿ ನೀಡಲಿಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣದ ವಿಚಾರದಲ್ಲಿ ಮೌನ. ರಾಜ್ಯ ಸರ್ಕಾರದ ವಿರುದ್ಧ ಶೇಕಡ 40ರಷ್ಟು ಕಮಿಷನ್ ಕಪ್ಪು ಚುಕ್ಕಿ ಕುತ್ತಿದೆ, ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕರೆ ಎ1 ಆರೋಪಿ ಆಗಿದ್ದಾರೆ. ಇದರ ಮೌನವೆಂದು ಕಿಡಿ ಕಾರಲಾಗುತ್ತಿದೆ.
ಇನ್ನು ಮೋದಿ ಹಾಗೂ ಅಮಿತ್ ಶಾ ಪದೆಪದೆ ರಾಜ್ಯಕ್ಕೆ ಭೇಟಿ ನೀಡಿ, ಜನರ ತೆರಿಗೆ ಹಣ ಹಾಳು ಮಾಡುತ್ತಿದ್ದಾರೆ. ಇಲ್ಲಿಯ ಬಿಜೆಪಿ ನಾಯಕರಿಗೆ ಪಕ್ಷ ಸಂಘಟನೆಯ ಶಕ್ತಿ ಇಲ್ಲವಾ, ಎಲ್ಲದಕ್ಕೂ ಮೋದಿ ಮೋದಿ ಎನ್ನುತ್ತಾ ಹೋದರೆ ನಾಳೆ ಗ್ರಾಮ ಪಂಚಾಯ್ತಿ ಚುನಾವಣೆಗೂ ಅವರನ್ನೇ ಕರೆದುಕೊಂಡು ಬರಬೇಕಾಗುತ್ತೆ ಎಂದು ಕಾಲೆಳೆಯಲಾಗುತ್ತಿದೆ. ರಾಜ್ಯ ನಾಯಕರಿಗೆ ಬಗ್ಗೆ ಮೋದಿ, ಅಮಿತ್ ಶಾಗೆ ನಂಬಿಕೆ ಇಲ್ಲ. ಹೀಗಾಗಿ ಪದೆಪದೆ ಭೇಟಿ ನೀಡಿ ಗೆಲುವಿಗೆ ಸರ್ಕಸ್ ಮಾಡುತ್ತಿದ್ದಾರೆ. ಧಮ್, ತಾಕತ್ತು ಬಗ್ಗೆ ಪ್ರಶ್ನಿಸುವ ಸಿಎಂ ಬೊಮ್ಮಾಯಿ ಅವರು ಇದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಲಾಗುತ್ತಿದೆ.