ಪ್ರಜಾಸ್ತ್ರ ಸುದ್ದಿ
ಧಾರವಾಡ: ಕೃಷಿ ಕ್ಷೇತ್ರದಲ್ಲಿನ ಅಪಾರವಾದ ಸಾಧನೆಗೆ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಅವರಿಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಜೂನ್ 16ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಡಾಕ್ಟರೇಟ್ ಪದವಿ ಪ್ರಮಾಣ ಮಾಡಲಿದ್ದಾರೆ.
ಹಾಲಕ್ಕಿ ಸಮುದಾಯದ ತುಳಸಿಗೌಡ ಅವರು ಮೂಲತಃ ಅಂಕೋಲಾ ತಾಲೂಕಿನ ಅಗಸೂರಿನ ಹೊನ್ನಳ್ಳಿ ಗ್ರಾಮದ ನಿವಾಸಿ. 2ನೇ ವಯಸ್ಸಿಗೆ ತಂದೆಯನ್ನ ಕಳೆದುಕೊಂಡ ಅವರು ತಾಯಿಯೊಂದಿಗೆ ಕೂಲಿ ಕೆಲಸ ಮಾಡಿದರು. ಊರಿನವರೊಂದಿಗೆ ಕಟ್ಟಿಗೆ ತರುವ ಕೆಲಸ ಮಾಡುತ್ತಿದ್ದ ತುಳಸಿ ಅವರಿಗೆ ಅರಣ್ಯ ಇಲಾಖೆ ಬೀಜ ನೀಡಿ ಸಸಿಗಳನ್ನು ಮಾಡಿಕೊಡುವ ಕೆಲಸ ನೀಡಿತು.
1.25 ಪೈಸೆಯಿಂದ ಕೆಲಸ ಶುರು ಮಾಡಿದರು. ಇವರ ಕೈಯಿಂದ ಲಕ್ಷಾಂತರ ಗಿಡಗಳು ಬೆಳೆದವು. ಶಾಲೆ, ಸರ್ಕಾರಿ ಕಚೇರಿ, ರಸ್ತೆ ಪಕ್ಕದಲ್ಲಿ ಗಿಡಗಳನ್ನು ನೆಡಲು ಶುರು ಮಾಡಿದರು. ವರ್ಷಕ್ಕೆ 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲು ಶುರು ಮಾಡಿದರು. ಇವರ ಪರಿಸರ ಕಾರ್ಯಕ್ಕೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ಕೇಂದ್ರದ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸಂದಿತು. ಶಾಲೆಯ ಮೆಟ್ಟಿಲು ಹತ್ತದೆ ಇಷ್ಟೊಂದು ಸಾಧನೆ ಮಾಡಿದ ಇವರಿಗೆ ಈಗ ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಬಂದಿದೆ.