ಪ್ರಜಾಸ್ತ್ರ ಸುದ್ದಿ
ಮೈಸೂರು: ಮೈಸೂರಿನಲ್ಲಿ ಬಿಜೆಪಿ ಒಂದು ಪಕ್ಷ ಆರು ಬಾಗಿಲು ಎಂಬಂತಾಗಿದೆ. ಮೈತ್ರಿ ಹೆಸರಲ್ಲಿ ಜೆಡಿಎಸ್ ಗೂ ಅಸ್ತಿತ್ವ ಇಲ್ಲದಂತಾಗಿದೆ. ಬಿಜೆಪಿ ಬಡವರ, ದಲಿತರ, ಒಕ್ಕಲಿಗರ ವಿರೋಧಿ ಪಕ್ಷ ಎಂದು ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಹೇಳಿದರು.
ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕು ಚುನಾವಣೆಗಳಲ್ಲಿ ಸೋತಿದ್ದೇನೆ. ಸುಸ್ತಾಗಿದ್ದೇನೆ. ಇದು ನನಗೆ ಕೊನೆಯ ಅವಕಾಶ. ಈ ಬಾರಿಯೂ ಮತದಾರ ಕೈ ಹಿಡಿಯದಿದ್ದರೆ ಸತ್ತಂತೆ. 1977ರಲ್ಲಿ ಒಕ್ಕಲಿಗ ಸಮುದಾಯದ ತುಳಿಸಿದಾಸರಿಗೆ ಟಿಕೆಟ್ ನೀಡಿತ್ತು. ಇದಾದ ಬಳಿಕ ಇದೀಗ ಟಿಕೆಟ್ ಸಿಕ್ಕಿದೆ. ಕ್ಷೇತ್ರದಲ್ಲಿ ಪರಿಶಿಷ್ಟರು ಬಿಟ್ಟರೆ ಒಕ್ಕಲಿಗರು, ಮುಸ್ಲಿಂರ ಮತಗಳು ಹೆಚ್ಚಿಗಿವೆ. ನಾನು ಜಾತಿ ನೋಡಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತೇನೆ ಅಂತಾ ಹೇಳಿದರು.
ಹೋರಾಟದಿಂದ ಬಂದವನು, ಜನರ ನಡುವೆ ಇರುವವನು. ರಾಜಕೀಯ ಕುಟುಂಬದಿಂದ ಬಂದವನಲ್ಲ. ಮನೆ ಬಾಗಿಲಿಗೆ ಬರುವ ವ್ಯಕ್ತಿ ಬೇಕಾ ಅಥವ ಮನೆ ಬಳಿ ಹೋಗಿ ಕಾಯುವ ಪರಿಸ್ಥಿತಿ ಬೇಕಾ ಅಂತಾ ಜನರು ತೀರ್ಮಾನಿಸಲಿ. ನನ್ನ ಹೆಸರ ಮುಂದೆ ರಾಜ, ಮಹಾರಾಜ ಇಲ್ಲ. ಚುನಾವಣೆ ಸಂದರ್ಭದಲ್ಲಿ ಗೌಡ ಅಂತಾನೂ ಸೇರಿಸಿಕೊಳ್ಳುವುದಿಲ್ಲ ಎಂದರು.