ಸಿಂದಗಿ: ತಾಲೂಕಿನ ಯರಗಲ್ಲ ಬಿ.ಕೆ ಗ್ರಾಮದ 22 ವರ್ಷದ ಆಕಾಶ ಪರಗೊಂಡ ಅನ್ನೋ ಯುವಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಬೈಕ್ ಹಾಗೂ ಗೂಡ್ಸ್ ವಾಹನ ನಡುವೆ ಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿತ್ತು.
ಪಟ್ಟಣದ ಹೊರವಲಯದ ಲೋಯಲ್ ಸ್ಕೂಲ್ ಹತ್ತಿರ ವಿಜಯಪುರ-ಕಲಬುರ್ಗಿ ಎನ್ 50 ರೋಡ್ ನಲ್ಲಿ ಅಪಘಾತ ಸಂಭವಿಸಿದೆ. ಯರಗಲ್ಲ ಬಿ.ಕೆ ಗ್ರಾಮದ ಆಕಾಶ ಪರಗೊಂಡ ಸಿಂದಗಿ ಜಿಲ್ಲಾ ಪಂಚಾಯತ್ ಆಫೀಸ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದ. ಹೀಗಾಗಿ ನಿತ್ಯ ಗ್ರಾಮದಿಂದ ಸಿಂದಗಿಗೆ ಕೆಲಸಕ್ಕೆ ಬರ್ತಿದ್ದ. ಅದರಂತೆ ಗುರುವಾರ ಬೆಳಗ್ಗೆ ಸಿಂದಗಿಗೆ ಬರುವಾಗ ಸುಮಾರು 10 ಗಂಟೆ ಟೈಂನಲ್ಲಿ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್ ಸವಾರ ಆಕಾಶನ ಕಾಲೊಂದು ಸಂಪೂರ್ಣವಾಗಿ ಮುರಿದು ಹೋಗಿದ್ದು, ತಲೆಗೂ ಸಹ ಗಂಭೀರ ಗಾಯವಾಗಿದೆ. ಗೂಡ್ಸ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳ್ತಿದ್ದಾರೆ.
ಘಟನೆ ನಡೆದ ತಕ್ಷಣ ಆಕಾಶನ ತಾಯಿ ಹಾಗೂ ಸಂಬಂಧಿಕರೊಬ್ಬರು ಬಂದು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಸಂಜೀವಿನಿ ಅನ್ನೋ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ ಆಕಾಶ ಸಾವನ್ನಪಿದ್ದು, ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.