ಆಲಮೇಲ: ವಿಜಯಪುರ ಜಿಲ್ಲೆಯ ನೂತನ ತಾಲೂಕು ಆಲಮೇಲದಲ್ಲಿ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಡಣಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನ ಮಾಡಲಾಗಿದೆ.
ಈ ಭಾಗದ ಖ್ಯಾತ ಸಾಹಿತಿ ಸಿದ್ದರಾಮ ಉಪ್ಪಿನ ಅವರು ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾರೋಟದಲ್ಲಿ ಮೆರವಣಿಗೆ ನಡೆಸುವ ಮೂಲಕ ಅಕ್ಷರ ಜಾತ್ರೆ ನಡೆಯಲಿದೆ. ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ ಕತ್ತಿ ಅವರ ನೇತೃತ್ವದಲ್ಲಿ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಸಾಹಿತ್ಯ ವೇದಿಕೆಗಳು, ಸಾಹಿತ್ಯದ ಅಭಿಮಾನಿಗಳು ಸೇರಿಕೊಂಡು ನುಡಿಹಬ್ಬ ಮಾಡ್ತಿದ್ದಾರೆ.
ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಉಪನ್ಯಾಸ, ಪುಸ್ತಕ ಮಾರಾಟ ಮಳಿಗೆ ಸೇರಿದಂತೆ ಸಾಹಿತ್ಯ ಪ್ರಕಾರದ ಹಲವು ಕಾರ್ಯಗಳು ನಡೆಯಲಿವೆ. ಅಕ್ಷರ ಜಾತ್ರೆಗೆ ಬರುವ ಸಾಹಿತ್ಯದ ಅಭಿಮಾನಿಗಳಿಗೆ ಊಟ ಉಪಚಾರದ ವ್ಯವಸ್ಥೆ ಮಾಡಲಾಗಿದೆ.