ಪ್ರಜಾಸ್ತ್ರ ಸುದ್ದಿ
ಆನೇಕಲ್: ಅತ್ತಿಬೆಲೆ ಗಡಿ ಹತ್ತಿರದ ಬಾಲಾಜಿ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಗಡದಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.
ಘಟನೆ ಸಂಬಂಧ ಅಂಗಡಿ ಮಾಲೀಕ ನವೀನ್ ಬಿನ್ ರಾಮಸ್ವಾಮಿರೆಡ್ಡಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಡಿಐಜಿ ರವಿಕಾಂತೇಗೌಡ ತಿಳಿಸಿದ್ದಾರೆ. ಶನಿವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 12 ಜನ ಮೃತಪಟ್ಟವರಲ್ಲಿ ಪಟಾಕಿ ಖರೀದಿಸಲು ಬಂದವರು ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಟಾಕಿ ಮಾರಾಟದ ಅಂಗಡಿಗೆ ಮಾತ್ರ ಪರವಾನಿಗೆ ಪಡೆಯಲಾಗಿತ್ತು. ದಾಸ್ತಾನು ಕಟ್ಟಡಕ್ಕೆ ಪರವಾನಿಗೆ ಇರಲಿಲ್ಲ. ಗೋದಾಮು ತುಂಬಾ ಇಕ್ಕಟ್ಟಾಗಿದ್ದರಿಂದ ಇದರಲ್ಲಿ ಕಾರ್ಮಿಕರು ಸಿಲುಕಿದ್ದರು. ಹೀಗಾಗಿ ಹೊರ ಬರಲು ಆಗದೆ ಸಾವನ್ನಪ್ಪಿದ್ದಾರೆ. ಕಟ್ಟಡ ಯಾವಾಗ ಬೀಳುತ್ತೋ ಗೊತ್ತಿಲ್ಲ ಅಂತಹ ಸ್ಥಿತಿಯಲ್ಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.