ಪ್ರಜಾಸ್ತ್ರ ಸದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯ ಯಾವುದೇ ಮೂಲೆ, ಸಿಗ್ನಲ್ ಬಳಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವವರು ಭಿಕ್ಷೆ ಬೇಡವವರು. ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅನ್ನೋದು ತಿಳಿದು ಬಂದಿದೆ.
ವಿಜಯನಗರ, ಮಲ್ಲೇಶ್ವರಂ, ಗುರುಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಜಾಲಹಳ್ಳಿ, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ. ಪುಟ್ಟ ಪುಟ್ಟ ಮಕ್ಕಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಭಿಕ್ಷೆ ಬೇಡಲಾಗುತ್ತಿದೆ. ಆದರೆ, ಇದರ ಹಿಂದೆ ಹಣ ಮಾಡುವ ಕರಾಳ ದಂಧೆ ಇದೆ ಅನ್ನೋ ಭಯಾನಕ ಅಂಶವೊಂದು ಹೊರಬಿದ್ದಿದೆ. ಇದಕ್ಕಾಗಿ ಮಕ್ಕಳನ್ನು ಬಾಡಿಗೆಗೆ ತರುತ್ತಾರೆ ಎಂದು ಸಹ ಹೇಳಲಾಗುತ್ತಿದೆ.
ಭಿಕ್ಷಾಟನೆ ಮುಕ್ತ ಬೆಂಗಳೂರು ಅಭಿಯಾನ ಸಹ ಶುರು ಮಾಡಲಾಗಿತ್ತು. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಭಿಕ್ಷೆ ಬೇಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ಇರೋದರಿಂದ ಮಕ್ಕಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 20 ಸಾವಿರ ಭಿಕ್ಷುಕರಿದ್ದಾರಂತೆ. ರಾಜ್ಯದ ಶೇಕಡ 25ರಷ್ಟು ಭಿಕ್ಷಕರು ಬೆಂಗಳೂರಿನಲ್ಲಿದ್ದಾರಂತೆ. ಕನಿಷ್ಠ 2 ಸಾವಿರ ಒಂದು ದಿನಕ್ಕೆ ಸಂಪಾದನೆ ಮಾಡುತ್ತಾರಂತೆ.