ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಧಾರವಾಡ: ಭವಿಷ್ಯದ ಜನಾಂಗಕ್ಕೆ ಅನುಭವಿ ಸಾಹಿತಿಯಿಂದ ಮಹಾತ್ಮರ ಸಾಹಿತ್ಯ ಮತ್ತು ವಿಚಾರಗಳನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಭಿಪ್ರಾಯಪಟ್ಟರು. ಡಾ.ಎಂ.ಎಸ್.ಸುಂಕಾಪುರ 101ನೇಯ ಜನ್ಮದಿನದ ಅಂಗವಾಗಿ ನಗರದ ಕುಲಪುರೋಹಿತ ಆಲೂರ ವೆಂಕಟರಾವ ಸಭಾಂಗಣದಲ್ಲಿ ಸ್ವಪ್ನ ಬುಕ್ ಹೌಸ ಪ್ರಕಟಿಸಿದ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸ್ತುತ ಸಾಹಿತ್ಯದ ವಿವಿಧ ಪ್ರಕಾರದ ಗುಣಾತ್ಮಕ ಸಂಶೋಧನೆಗಳು ನಡೆಯಬೇಕಾಗಿದೆ. ಸುಂಕಾಪುರ ಅವರ ಪ್ರಬಂಧ ಮೂರು ಮರುಮುದ್ರಣಗೋಳ್ಳುತ್ತಿರುವುದು ಆ ಸಂಶೋಧನೆಯ ಗುಣಮಟ್ಟವನ್ನು ಸೂಚಿಸುತ್ತದೆ ಎಂದರು. ಅನೇಕ ಮಹಾನ್ ಪ್ರಾಧ್ಯಾಪಕರು ಕವಿವಿಯ ಶ್ರೇಷ್ಠತೆಯನ್ನು ಹೆಚ್ಚಿಸಿದ್ದಾರೆ. ಅವರು ಜೀವನದಲ್ಲಿ ಅನುಭವ ಪಡೆದ ಮತ್ತು ಆದರ್ಶ ವ್ಯಕ್ತಿಗಳ, ಸಾಹಿತ್ಯಿಗಳ ಸಾಂಗತ್ಯ ಹೊಂದುವುದರಿಂದ ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಕೃತಿಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಎಂ.ಹೆಗಡೆ ಮಾತನಾಡಿದರು. ಹಿರಿಯ ಸಾಹಿತಿ ಡಾ.ಗುರಲಿಂಗ ಕಾಪಸೆ, ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಲೋಕೋಪಯೋಗಿ ಕಾರ್ಯದರ್ಶಿ ಜಿ.ಸಿ.ತಲ್ಲೂರ, ಕವಿವಿ ಬಸವ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸಿ.ಎಂ.ಕುಂದಗೋಳ, ಡಾ.ಮಲ್ಲಿಕಾರ್ಜುನ ಪಾಟೀಲ, ಡಾ.ಬಸು ಬೇವಿನಗಿಡದ, ಡಾ.ಬಾಳಣ್ಣ ಶಿಗೇಹಳ್ಳಿ, ಡಾ.ಕೆ.ಆರ್.ದುರ್ಗಾದಾಸ ಮತ್ತು ಡಾ.ಎಂ.ಎಸ್.ಸುಂಕಾಪುರ ಅವರ ಕುಟುಂಬ ವರ್ಗದವರು ಹಾಜರಿದ್ದರು.