ಸಿಂದಗಿ: ಪಟ್ಟಣದ ಮಾಂಗಲ್ಯ ಭವನದಲ್ಲಿ ನಿವೃತ್ತ ಶಿಕ್ಷಕ ಡಾ.ಜಿ.ಎಸ್ ಭೂಸಗೊಂಡ ಅವರ ‘ದೃಶ್ಯಕಲಾ ಸಾಹಿತ್ಯ ಸಮಾಲೋಚನೆ’ ಹಾಗೂ ಆಶಾ ಭೂಸಗೊಂಡ ಅವರ ‘ಭಾವಭಿತ್ತಿ’ ಅನ್ನೋ ಕೃತಿಗಳು ಲೋಕಾರ್ಪಣೆಗೊಂಡ್ವು.
ಇಂಡಿಯ ಓಂಕಾರ ಆಶ್ರಮದ ಡಾ.ಸ್ವರೂಪಾನಂದ ಮಹಾಸ್ವಾಮಿಗಳು ಗ್ರಂಥಗಳನ್ನ ಬಿಡುಗಡೆ ಮಾಡಿದ್ರು. ಕೃತಿ ಬಿಡುಗಡೆಗೊಳಿಸಿ ಮಾತ್ನಾಡಿದ ಶ್ರೀಗಳು, ತಂದೆ ಮಗಳ ಪುಸ್ತಕ ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗ್ತಿರುವುದು ಅವಿಸ್ಮರಣೀಯ ಅಂತಾ ಹೇಳಿದ್ರು. ಋಷಿಮುನಿಗಳು ಹೇಳಿದಂತೆ ಮನುಷ್ಯ ಜೀವನ ಪರೋಪಕಾರದಿಂದ ಕೂಡಿರಬೇಕು. ಸಾಕ್ಷರತೆ ಹೆಚ್ಚಾದಂತೆ ರಾಕ್ಷಸರಾಗ್ತಾರೆ. ಅದಾಗಬಾರದು ಅನ್ನೋ ಕಿವಿ ಮಾತು ಹೇಳಿದ್ರು.
ದೃಶ್ಯಕಲಾ ಸಾಹಿತ್ಯ ಸಮಾಲೋಚನೆ ಕೃತಿ ಪರಿಚಯವನ್ನ ಬಾದಾಮಿಯ ಲಲಿತಕಲಾ ವಿವಿಯ ನಿಕಟಪೂರ್ವ ವಿಶೇಷಾಧಿಕಾರಿಗಳಾದ ಡಾ.ಎಸ್ ಸಿ ಪಾಟೀಲ ಮಾಡಿದ್ರು. ಆದಿಮಾನವರ ಚಿತ್ರಕಲೆ, ಕರ್ನಾಟಕ ಚಿತ್ರಕಲೆ, ಕಲೆ ಎಂದರೇನು?, ಭಾರತೀಯ ಮತ್ತು ಪಾಶ್ಚಿಮಾತ್ಯ ಚಿತ್ರಕಲೆ ಸೇರಿದಂತೆ 12 ಲೇಖನಗಳ ವಿಶೇಷ ಕೃತಿಯಾಗಿದೆ. ಚಿತ್ರಕಲೆ ಕುರಿತು ಅಧ್ಯಯನ ಮಾಡುವವರಿಗೆ ಆಕಾರಗ್ರಂಥವಾಗುತ್ತೆ ಅಂತಾ ಹೇಳಿದ್ರು.
ಭಾವಭಿತ್ತಿ ಕೃತಿ ಪರಿಚಯ ಮಾಡಿದ ಮಕ್ಕಳ ಸಾಹಿತಿ ಪ.ಗು ಸಿದ್ದಾಪೂರ ಅವರು, 49 ಕವಿತೆಗಳ ಸಂಕಲನ ನೋಡಿದಾಗ ನನ್ಗೆ ಹೊಟ್ಟೆಕಿಚ್ಚು ಆಗುವಷ್ಟು ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಲೇಖಕಿಯ ವಯಸ್ಸು ಹಾಗೂ ಅನುಭವ ಮೀರಿದ ಕವಿತೆಗಳಿದ್ದು, ಎಲ್ಲವೂ ಬೆಂದ ಕವಿತೆಗಳಾಗಿವೆ ಅಂತಾ ಹೇಳಿದ್ರು. ಇನ್ನು ಚೊಚ್ಚಲ ಕೃತಿಯ ಕವಯತ್ರಿ ಆಶಾ ಭೂಸಗೊಂಡ ತಮ್ಮ ಸಾಹಿತ್ಯಕ್ಕೆ ಸ್ಪೂರ್ತಿಯಾದವರ ಬಗ್ಗೆ ಸಂಕ್ಷಿಪ್ತವಾಗಿ ಮಾತ್ನಾಡಿದ್ರು.
ಕಾರ್ಯಕ್ರಮದ ಸಾನಿಧ್ಯವನ್ನ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಅಧ್ಯಕ್ಷತೆಯನ್ನ ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ ವಹಿಸಿಕೊಂಡಿದ್ರು. ಎಂ.ಎಸ್ ಭೂಸಗೊಂಡ ಸ್ವಾಗತಿಸಿದ್ರು. ಲೇಖಕ ಡಾ.ಜಿ.ಎಸ್ ಭೂಸಗೊಂಡ ಪ್ರಾಸ್ತಾವಿಕವಾಗಿ ಮಾತ್ನಾಡಿದ್ರು. ಗುರುನಾಥ ಅರಳಗೊಂಡಗಿ ಹಾಗೂ ಅಶೋಕ ಬಿರಾದರ ನಿರೂಪಿಸಿದ್ರು. ಬಾಪುದೇವು ನಾಯಕ ವಂದಿಸಿದ್ರು.