ಬೆಂಗಳೂರು: ಸಿಲಿಕಾನ್ ಸಿಟಿ ಇವತ್ತು ಕಂಪ್ಲೀಟ್ ಚಿತ್ರಸಂತೆಯಲ್ಲಿ ಮುಳುಗಿ ಹೋಗಿತ್ತು. ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆಯೋಜಿಸಿದ್ದ 17ನೇ ಚಿತ್ರಸಂತೆ ಅದ್ಧೂರಿಯಾಗಿ ನಡೆಯಿತು.
ಈ ಬಾರಿಯ ಚಿತ್ರಸಂತೆಯನ್ನ ನೇಗಿಲಯೋಗಿಗೆ ಸಮರ್ಪಣೆ ಮಾಡಲಾಗಿತ್ತು. ಇದನ್ನ ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದ್ರು. ಈ ವೇಳೆ ಮಾಜಿ ಸಿಎಂ ಎಸ್.ಎಂ ಕೃಷ್ಣ, ಡಿಸಿಎಂ ಅಶ್ವಥನಾರಾಯಣ, ಸಚಿವರಾದ ಸಿ.ಟಿ ರವಿ, ಡಿ.ವಿ ಸದಾನಂದಗೌಡ, ಸಂಸದ ಪಿ.ಸಿ ಮೋಹನ, ಶಾಸಕರಾದ ರಿಜ್ವಾನ ಅರ್ಷದ, ಎಸ್.ಟಿ ಸೋಮಶೇಖರ, ಮೇಯರ್ ಗೌತಮಕುಮಾರ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ ಸೇರಿದಂತೆ ಅನೇಕರು ಭಾಗವಹಿಸಿದ್ರು.
ಶಿವಾನಂದ ಸರ್ಕಲ್, ಹೆಬ್ಬಾಳ ರೋಡ್, ರೇಸ್ ಕೋರ್ಸ್, ಫಿಲ್ಮ್ ಚೇಂಬರ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಏರಿಯಾ ಸಂಪೂರ್ಣವಾಗಿ ಜನಜಂಗುಳಿಯಿಂದ ತುಂಬಿಕೊಂಡಿತ್ತು. ಎಲ್ಲಿ ನೋಡಿದ್ರೂ ಅದ್ಬುತ ಕಲಾಕೃತಿಗಳು. ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಕಲಾವಿದರು ಬಂದಿದ್ರು. 100 ರೂಪಾಯಿಯಿಂದ 40, 50, 80 ಸಾವಿರ ರೂಪಾಯಿವರೆಗಿನ ಕಲಾಕೃತಿಗಳು ಮಾರಾಟಕ್ಕಿದ್ವು. ಇದನ್ನ ನೋಡಲು, ಖರೀದಿಸಲು ಲಕ್ಷಾಂತರ ಜನರು ಸೇರಿದ್ರು. ಜನರಿಗೆ ಸುಮಧುರ ಕನ್ನಡ ಗೀತೆಗಳನ್ನ ಕೇಳಿಸುವ ಸಲುವಾಗಿ ನಾದೋಪಾಸನ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೆಲ್ಲವನ್ನ ಸವಿಯುತ್ತಾ ಸಿಲಿಕಾನ್ ಸಿಟಿ ಜನ ವೀಕೆಂಡ್ ಮಸ್ತಿ ಭರ್ಜರಿಯಾಗಿ ಮಾಡಿದ್ರು.
ಗಮನ ಸೆಳೆದವರು…
ಬೆಂಗಳೂರು ಮೂಲದ ಪರಮೇಶ ಡಿ ಜೋಳದ ಎಂಬುವರು, ನೇಗಿಲ ಆಕೃತಿಯನ್ನ ತಲೆಮೇಲೆ ಹೊತ್ತು ತಮ್ಮ ಇಡೀ ಮೈ ಕವರ್ ಮಾಡಿಕೊಂಡು ಗಮನ ಸೆಳೆದ್ರು. ರೈತರು ಇದ್ರೆ ನಾವು ಅನ್ನೋ ಸಂದೇಶ ಸಾರಿದ್ರು. 2015ರಿಂದ ಹೀಗೆ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ಪ್ರಸ್ತುತ ಸಾಮಾಜಿಕ ಬಿಕ್ಕಟ್ಟುಗಳ ಮೇಲೆ ಬೆಳಕು ಚೆಲ್ಲುವ ಕೆಲ್ಸ ಮಾಡ್ತಿದ್ದಾರೆ. ದೆಹಲಿ, ಚನ್ನೈ, ಕೊಯಮತ್ತೂರು, ಅಹ್ಮದಾಬಾದ್, ಒಡಿಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ.
ಇನ್ನೋರ್ವ ಯುವಕ ಫೋಟೋ ಫ್ರೇಮ್ ಒಳಗೆ ಕುಳಿತು ವಿಭಿನ್ನವಾಗಿ ಕಾಣಿಸಿಕೊಂಡ್ರು. ಭಾವಪೂರ್ಣ ಶ್ರದ್ಧಾಂಜಲಿ.. ನಿನ್ನೆ ಮರಣ.. ಇಂದು ಜನನ ಅನ್ನೋ ಟಿಪಿಕಲ್ ಆಗಿ ಬರೆದಿದ್ದು ನೋಡುಗರಲ್ಲಿ ಕುತೂಹಲ ಮೂಡಿಸಿತು. ಅಲ್ದೇ, ಅನೇಕರು ಏನು ಹೇಳಲು ಹೊರಟಿದ್ದಾರೆ ಅನ್ನೋ ಕನ್ ಫ್ಯೂಸ್ ನಲ್ಲಿಯೇ ಫೋಟೋ ತೆಗೆದುಕೊಳ್ತಿದ್ರು. ಮಾತ್ನಾಡದ ಸ್ಥಿತಿಯಲ್ಲಿದ್ದ ಕಾರಣಕ್ಕೆ ಅವರ ಕಾನ್ಸೆಪ್ಟ್ ಬಗ್ಗೆ ಮಾಹಿತಿ ಸಿಗ್ಲಿಲ್ಲ.
ಇನ್ನು ರಾಜಧಾನಿಯಲ್ಲಿ ಕನ್ನಡ ಮಾತ್ನಾಡುವವರ ಸಂಖ್ಯೆ ಕಡಿಮೆ ಆಗ್ತಿದೆ ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರ್ತಿದೆ. ಈ ನಿಟ್ಟಿನಲ್ಲಿ ಕನ್ನಡದ ಕೆಲ ಮನಸ್ಸುಗಳು ಸೇರಿಕೊಂಡು ಸಾವಿರಾರು, ಲಕ್ಷಾಂತರು ಜನರು ಸೇರುವ ಸ್ಥಳಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ರು. ಪ್ಲೇ ಕಾರ್ಡ್ ಹಿಡಿದು ಘೋಷಣೆ ಕೂಗಿದ್ರು. ಪುಟಾಣಿಗಳು ಡೈಲಾಗ್ ಹೊಡೆದು ಮೆಚ್ಚುಗೆ ಪಡೆದ್ರು.
ಬೆಳಗ್ಗೆ 8ಗಂಟೆಯಿಂದ ಸಂಜೆ 8ಗಂಟೆಯವರೆಗೂ ನಡೆದ ಚಿತ್ರಸಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಲೆಯ ಜೊತೆಗೆ ವಿಶೇಷ ತಿನಿಸುಗಳನ್ನ ತಿಂದು, ಭರ್ಜರಿಯಾಗಿ ಫೋಟೋ ಪೋಸ್ ಕೊಟ್ಟು ಮನೆ ಕಡೆ ಹೆಜ್ಜೆ ಹಾಕಿದ್ರು.