ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದರೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಎನ್ನುವ ಅನಂತರಕುಮಾರ್ ಹೆಗಡೆ ಹೇಳಿಕೆ ಈ ನೆಲದ ಕಾನೂನಿ ಬಗ್ಗೆ ಅವರಿಗಿರುವ ತಿರಸ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್ ಎಸ್ಎಸ್ ಬೆಂಬಲದ ಅನಂತರಕುಮಾರ್ ಹೆಗಡೆ ವಿರುದ್ಧ ಕ್ರಮ ತೆಗೆದುಕೊಳ್ಳುವ ದಮ್ಮು, ತಾಕತ್ತು ಇಲ್ಲ. ಮೋದಿ ಸೇರಿ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ, ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು. ಇಲ್ಲವೇ ಅವರ ಹೇಳಿಕೆಗೆ ಸಹಮತವಿದೆ ಎಂದು ಘೋಷಿಸಬೇಕು ಎಂದಿದ್ದಾರೆ.
ಹೆಗಡೆ ಹೇಳಿಕೆಗೆ ಬಿಜೆಪಿಯ ನಿಜವಾದ ಹೈಕಮಾಂಡ್ ಆರ್ ಎಸ್ಎಸ್ ಸಂಪೂರ್ಣ ಬೆಂಬಲವಿದೆ. ಹೆಗಡೆ ಹೇಳಿರುವುದನ್ನೇ ಕಾಲ ಕಾಲಕ್ಕೆ ಆರ್ ಎಸ್ಎಸ್ ನಾಯಕರು ಹೇಳಿದರು. ಹೆಗಡೆ ಒಂದು ಮುಖವಾಡ ಅಷ್ಟೆ. ನಿಜವಾದ ಮುಖ ಆರ್ ಎಸ್ಎಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದನ್ನು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ತಳ್ಳಿ ಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ, ಈ ನೆಲದ ಕಾನೂನಿನ ಬಗ್ಗೆ ಅವರಿಗೆ ಇರುವ ತಿರಸ್ಕಾರವೂ ಹೌದು. ಹೆಗಡೆ ತಮ್ಮ ಮನೆಯ ಅಡುಗೆ ಮನೆಯಲ್ಲಿ ಹೇಳಿಕೆ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ. ದಲಿತರನ್ನು ನಾಯಿಗಳು ಎಂದು ದೂಷಿಸಿದ್ದಾರೆ. ಮನುಸ್ಮೃತಿಯನ್ನು ಬಹಿರಂಗವಾಗಿ ಸಮರ್ಥಿಸಿದ್ದಾರೆ ಅಂತಾ ಹೇಳಿದ್ದಾರೆ.