ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ 8 ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ‘ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಅನ್ನೋ ಹೆಸರಿನೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವೆ ರಾಣಿ ಸತೀಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿ ಅನೇಕರು ಉಪಸ್ಥಿತರಿದ್ದರು.
ಈಗಾಗ್ಲೇ ನಾವು 7 ಗ್ಯಾರಂಟಿಗಳನ್ನು ನೀಡಿದ್ದೇವೆ. ಅವುಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸುತ್ತೇವೆ. ನಮ್ಮ ಗುರು 150 ಸ್ಥಾನ ಗೆಲ್ಲುವುದು. ಅದನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮಾತನಾಡಿದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು
ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ, ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆ ಅಡಿಯಲ್ಲಿ ಒಳ್ಳೆಯ ನಿರ್ಧಾರ.
ಅಂಗನವಾಡಿ ಕಾರ್ಯಕರ್ತರ ವೇಲೆ 15 ಸಾವಿರಕ್ಕೆ ಹೆಚ್ಚಳ. ಮಿನಿ ಕಾರ್ಯಕರ್ತರ ವೇತನ 10 ಸಾವಿರಕ್ಕೆ ಹೆಚ್ಚಳ. ವಿಶ್ರಾಂತಿ ವೇತನ 2 ಲಕ್ಷ ರೂಪಾಯಿ.
ಆಶಾ ಕಾರ್ಯಕರ್ತೆಯರಿಗೆ ಗೌರವಧನ 5 ಸಾವಿರದಿಂದ 8 ಸಾವಿರ ರೂಪಾಯಿಗೆ ಹೆಚ್ಚಳ.
ಬಿಸಿಯೂಟದ ಅಡುಗೆಯವರಿಗೆ 3,600 ರೂಪಾಯಿಯಿಂದ 6 ಸಾವಿರ ರೂಪಾಯಿಗೆ ಹೆಚ್ಚಳ.
ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳು ಒಂದು ವರ್ಷದಲ್ಲಿ ಭರ್ತಿ.
ಕನಕಪುರದಲ್ಲಿ ಅತ್ಯಾಧುನಿಕ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.
ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ.
ಮಹಿಳಾ ದೌರ್ಜನ್ಯ ತಡೆಯಲ್ಲಿ ಕಾನೂನಿನಲ್ಲಿ ಕಠಿಣ ಕ್ರಮ.
ಬಿಜೆಪಿ ಜಾರಿಗೆ ತಂದ ಜನವಿರೋಧಿ ಯೋಜನೆಗಳು ಒಂದು ವರ್ಷದಲ್ಲಿ ರದ್ದು.
ರಾಜ್ಯದ ಎಲ್ಲ ನ್ಯಾಯಾಲಯಗಳ ಆಧುನೀಕರಣಕ್ಕೆ 3 ಸಾವಿರ ಕೋಟಿ ಪ್ರತ್ಯೇಕ ನಿಧಿ.
ಸಾಲು ನೀಡುವ ಆಪ್ ಗಳ ಮೇಲೆ 100 ದಿನದೊಳಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿ.
ಐದು ವರ್ಷದಲ್ಲಿ ಮೇಕೆದಾಟು, ಮಹದಾಯಿ ಯೋಜನೆ ಪೂರ್ಣ.
ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ. ಮಹದಾಯಿ ಯೋಜನೆಗೆ 3 ಸಾವಿರ ಕೋಟಿ.
ಹಾಲಿನ ಸಬ್ಸಿಡಿ 5ರಿಂದ 7 ರೂಪಾಯಿಗೆ ಹೆಚ್ಚಳ.
ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ.
ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಠಿಣ ಕ್ರಮ.
ಸಂವಿಧಾನದ ವಿಧಿಗಳನ್ನು ಬಜರಂಗ ದಳ, ಪಿಎಫ್ಐ ಸೇರಿ ಯಾರೆ ಉಲ್ಲಂಘಿಸಿದರೂ ಕಠಿಣ ಕ್ರಮ.
ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆ.
ಬಸವಣ್ಣ, ಪಂಪ, ಕುವೆಂಪು ಸೇರಿ ಪ್ರಮುಖರ ವಿಚಾರಗಳು ವಾಪಸ್ ಪಠ್ಯಪುಸ್ತಕಗಳಿಗೆ ಸೇರಿಸಲು ಕ್ರಮ.
ಹೀಗೆ ಸಾಕಷ್ಟು ಪ್ರಮುಖ ಅಂಶಗಳನ್ನು ಇಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆ ಒಳಗೊಂಡಿದೆ.