ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಆಗಾಗಾ ಹೇಳಿಕೆ ನೀಡುತ್ತಲೇ ಇರುವ ಸ್ವಪಕ್ಷೀಯ ಶಾಸಕ ಶಾಮನೂರು ಶಿವಶಂಕರಪ್ಪ, ಇದೀಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರನನ್ನ ಮತ್ತೊಮ್ಮೆ ಗೆಲ್ಲಿಸಿ ಎಂದಿದ್ದಾರೆ. ಇದರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕನಿಂದ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ.
ಬೆಕ್ಕಿನಕಲ್ಮಠದ ಜಗದ್ಗುರು ಶ್ರೀ ಗುರುಬಸವಸ್ವಾಮೀಜಿಗಳ 112ನೇ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ ವೇಳೆ ಈ ರೀತಿ ಹೇಳಿದ್ದಾರೆ. ರಾಘವೇಂದ್ರ ಅವರಂತಹ ಸಂಸದರನ್ನು ಪಡೆದ ನೀವೇ ಧನ್ಯರು. ಎಲ್ಲ ಕೆಲಸ ತಮ್ಮಿಂದ ಆಗದಿದ್ದರೆ ಆಗುವ ರೀತಿಯಲ್ಲಿ ಮಾಡುವಂತಹ ಧೀಮಂತ ನಾಯಕ. ಬಿಜೆಪಿಯಿಂದ ಬೇರೆ ಯಾರಿಗೂ ಟಿಕೆಟ್ ಕೊಡುವುದಿಲ್ಲ. ರಾಘವೇಂದ್ರ ಮತ್ತೆ ಸ್ಪರ್ಧಿಸುತ್ತಾರೆ. ಅಭಿವೃದ್ಧಿಯ ತೂಕಮಾಡಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೇಳಿತ್ತಿರುವ ಕಾಂಗ್ರೆಸ್ ನಾಯಕರಿಗೆ ಸ್ವಪಕ್ಷದಲ್ಲಿಯೇ ಈ ರೀತಿಯ ತೊಡರುಗಳಿವೆ ಎನ್ನುವ ಟೆನ್ಷನ್ ಶುರುವಾಗಿದೆ. ಕೆಲ ದಿನಗಳ ಹಿಂದೆ ಸರ್ಕಾರ ಬೀಳಿಸುವ ಹೇಳಿಕೆ ನೀಡಿದ್ದರು. ಆದರೂ ಕಾಂಗ್ರೆಸ್ ಇವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಇದೇ ಹೇಳಿಕೆಯನ್ನು ಹಿಂದುಳಿದ, ಅಲ್ಪಸಂಖ್ಯಾತ ನಾಯಕರು ನೀಡಿದ್ದರೆ ಏನು ಕಥೆ ಎಂದು ಕೇಳಲಾಗುತ್ತಿದೆ.