ಅಥಣಿ: ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕರೋನಾ ವೈರಸ್ ಪತ್ತೆಯಾಗಿದೆ. ಅದು ಮೂವರಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಡಿಸಿಎಂ ಲಕ್ಷ್ಮಣ ಸವದಿ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ರು.
ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೂರು ಜನರಿಗೆ ಕರೋನಾ ಸೋಂಕು ತಗಲಿರುವದು ದೃಢಪಟ್ಟಿದೆ. ಎರಡನೇ ಹಂತದ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಡಿಸಿಎಂ ಸವದಿ ತಿಳಿಸಿದ್ದಾರೆ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶವನ್ನ ಪಾಲಿಸಬೇಕು ಎಂದು ಹೇಳಿದರು. ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಬೆಳಗಾವಿ ಜಿಲ್ಲೆಯಿಂದಲೂ ಭಾಗವಹಿಸಿದ್ದು, ಇದೀಗ 67 ಜನರನ್ನ ಗುರುತಿಸಲಾಗಿದೆ. ದೆಹಲಿಗೆ ಹೋಗಿ ಬಂದವರಲ್ಲಿ ಮೂರು ಜನರ ವರದಿ ಪಾಸಿಟಿವ್ ಲಭ್ಯವಾಗಿದೆ ಎಂದು ಹೇಳಿದ್ರು.
ಇನ್ನು ರಾಜ್ಯದ ದ್ರಾಕ್ಷಿ, ದಾಳಿಂಬೆ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನ ನೆರೆಯ ಮಹಾರಾಷ್ಟ್ರಕ್ಕೆ ಅಂತರರಾಜ್ಯ ರಸ್ತೆಗಳನ್ನ ಮುಕ್ತ ಮಾಡುವಂತೆ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಸಿ, ಅನಕೂಲ ಕಲ್ಪಿಸಲಾಗಿದೆ. ಪೊಲೀಸ್ ಹಾಗೂ ಕೃಷಿ ಅಧಿಕಾರಿಗಳ ಜೊತೆಗೆ ಮಾತನಾಡಿದ್ದು ರೈತರ ಕೃಷಿ ಉತ್ಪನ್ನಗಳನ್ನ ಸಾಗಿಸಲು ಯಾವುದೆ ತೊಂದರೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.