ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಮದುವೆ, ಜಾತ್ರೆ ಸೇರಿದಂತೆ ಸಭೆ, ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಮದುವೆ ಸೇರಿದಂತೆ ವಿವಿಧ ಸಮಾರಂಭ ನಡೆಸಲು ಜಿಲ್ಲಾಧಿಗಳ ಅನುಮತಿ ಕಡ್ಡಾಯ ಮಾಡಿದೆ.
ಈ ಸಂಬಂಧ ಕಂದಾಯ ಸಚಿವ ಆರ್.ಅಶೋಕ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ರು. ಸಭೆ ಬಳಿಕ ಮಾತ್ನಾಡಿದ ಅವರು, ಕರೋನಾ ನಿಯಂತ್ರಣಕ್ಕಾಗಿ ಹೆಚ್ಚೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ನಿಷೇಧದ ನಡುವೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸಿದ್ರೆ ಜಿಲ್ಲಾಧಿಕಾರಿಗಳನ್ನ ಹೊಣೆ ಮಾಡಲಾಗುತ್ತೆ ಎಂದಿದ್ದಾರೆ.
ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡುವವರು ಜಿಲ್ಲಾಧಿಕಾರಿಯಿಂದ ಪರವಾನಿಗೆ ಪಡೆಯಬೇಕು ಎಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೃಹತ್ ಸಭೆ, ಸಮಾರಂಭ ನಡೆಸಿದ್ದಾರೆ. ಈಗ ಚುನಾವಣೆ ಮುಗಿಯಿತು. ನಿರ್ಬಂಧ ಶುರುವಾಗಿದೆ ಎಂದು ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ ಸುಧಾಕರ ಸೇರಿದಂತೆ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.