ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವರಾಗಿರುವ ಎಸ್.ಸುರೇಶಕುಮಾರ ಅವರು ಶಿಕ್ಷಕನೊಬ್ಬನ ಪಕ್ಕೆಲುಬು ಮುರಿದಿದ್ದಾರೆ. ಏನ್ರೀ ಶಿಕ್ಷಣ ಸಚಿವರು ಹೀಗೆಲ್ಲ ಮಾಡ್ತಾರಾ ಅಂತಾ ಕನ್ ಫ್ಯೂಸ್ ಆಗಬೇಡಿ. ವಿಷ್ಯ ಬೇರೆ ಇದೆ.
ಸರ್ಕಾರಿ ಶಾಲೆಯ ಮಗುವೊಂದು ಪಕ್ಕೆಲುಬು ಅನ್ನೋ ಪದವನ್ನ ಸರಿಯಾಗಿ ಉಚ್ಛಾರ ಮಾಡಲು ಬರದೆ ಸಾಕಷ್ಟು ಕಷ್ಟ ಪಡ್ತಿತ್ತು. ಅದನ್ನ ಹೇಳಿಕೊಡ್ತಿದ್ದ ಶಿಕ್ಷಕ ವಿಡಿಯೋ ಮಾಡಿಕೊಂಡಿದ್ದಾನೆ. ಆ ಪುಣ್ಯಾತ್ಮ ಅಷ್ಟಕ್ಕೆ ಸುಮ್ಮನಾಗದೆ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಇದು ಶಿಕ್ಷಣ ಸಚಿವರ ಗಮನಕ್ಕೂ ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಿದ ಸಚಿವರು, ಮಗುವಿನ ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡಲಾಗಿದೆ. ಶಿಕ್ಷಕ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದು, ಸೈಬರ್ ಕ್ರೈಂ ಮೂಲಕ ಯಾವ ಶಾಲೆಯ ವಿಡಿಯೋ, ಯಾರು ಹರಿಬಿಟ್ಟಿದ್ದಾರೆ ಅನ್ನೋದರ ಕುರಿತು ಪತ್ತೆ ಮಾಡಲು ಸೂಚಿಸಿದ್ದಾರೆ.
ಇನ್ಮುಂದೆ ಯಾರೇ ಶಿಕ್ಷಕರು ಮಕ್ಕಳ ಕಲಿಕೆಯ ವಿಷಯದಲ್ಲಿ ವ್ಯಂಗ್ಯ ರೀತಿಯಲ್ಲಿ ತೋರಿಸುವಂತಹ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಂತಹ ಕೃತ್ಯಗಳಿಗೆ ಮುಂದಾದ್ರೆ, ಶಿಕ್ಷಕ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹೂಡುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸೂತ್ತೋಲೆ ಹೊರಡಿಸಲು ಸೂಚಿಸಿದ್ದಾರೆ. ಶಿಕ್ಷಣ ಸಚಿವರ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.