ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುದೇವ ಹೊಯ್ಸಳ ಮಾರ್ಚ್ 30ರಂದು ರಿಲೀಸ್ ಅಬ್ಬರಿಸುತ್ತಿದೆ. ಖಡಕ್ ಪೊಲೀಸ್ ಆರ್ಭಟಕ್ಕೆ ಸಿನಿ ರಸಿಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಶೂಟಿಂಗ್ ನಡೆಸಿದ ಸಿನಿಮಾ, ಎಲ್ಲ ಆಯಾಮಗಳಿಂದ ನೋಡುಗರನ್ನು ಹಿಡಿಸಿದೆ.
ಎಲ್ಲ ಪೊಲೀಸ್ ಕಥೆಗಳಂತೆ ಇರದೆ ಇದು ಒಂದಿಷ್ಟು ವಿಭಿನ್ನವಾಗಿದೆ. ಮಾಸ್ ಡೈಲಾಗ್ ಗಳು ಇವೆ. ಅತಿಯಾಗಿಲ್ಲ. ಬಿಲ್ಡಪ್ ಇಲ್ಲ. ಒಂದು ಕಥೆಯಲ್ಲಿ ನೈಜ ಅಂಶಗಳು ಅಡಕವಾಗಿದ್ದು ಎಲ್ಲರೂ ಮೆಚ್ಚಿಕೊಳ್ಳುವಂತಿದೆ. ಜಾತಿ ಜಾತಿ ಅಂತೀ ಅಲ್ಲ. ತಗೋ ಈಗ ನಿನ್ನ ಮಗನ ಸಾವಿಗೆ ಇಲ್ಲಿ ಯಾರೂ ಜಾತಿ ಸರ್ಟಿಫಿಕೇಟ್ ಕೊಡುವುದಿಲ್ಲ ಎನ್ನುವ ಡೈಲಾಗ್, ಜಾತಿ ವ್ಯವಸ್ಥೆ ವಿರುದ್ಧ ತುಂಬಾ ತೀಕ್ಷಣವಾಗಿ ಹೇಳಲಾಗಿದೆ. ಹೀಗಾಗಿ ಡೈಲಾಗ್ ರೈಟರ್ ಮಾಸ್ತಿ ಗೆದ್ದಿದ್ದಾರೆ.
ಎಂದಿನಂತೆ ಡಾಲಿ ಧನಂಜಯ್ ಅಬ್ಬರಿಸಿದ್ದಾರೆ. ಇವರಿಗೆ ಜೋಡಿಯಾಗಿ ಈ ಹಿಂದೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಮೃತಾ ಅಯ್ಯರ್, ಇಲ್ಲಿಯೂ ಇದ್ದು ಹಂಡ್ತಿಯಾಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನವೀನ್ ಶಂಕರ್ ವಿಲನ್ ಪಾತ್ರದಲ್ಲಿ ಮಿಂಚಿದ್ದು, ಕನ್ನಡ ಸಿನಿ ದುನಿಯಾಗೆ ಒಳ್ಳೆಯ ವಿಲನ್ ಸಿಕ್ಕಂತಾಗಿದೆ.
ಒಳ್ಳೆಯ ಪೊಲೀಸ್ ಹೇಗಿರುತ್ತಾರೆ ಎನ್ನುವುದಕ್ಕೆ ಡಾಲಿ ಧನಂಜಯ್ ಪಾತ್ರ, ಕೆಟ್ಟ ಪೊಲೀಸ್ ಹೇಗಿರುತ್ತಾನೆ ಎನ್ನುವುದಕ್ಕೆ ಅಚ್ಚುತ್ ಕುಮಾರ್ ಪಾತ್ರ ತೋರಿಸಿಕೊಡುತ್ತವೆ. ಡಾಲಿಯ 25ನೇ ಚಿತ್ರ ಇದ್ದಾಗಿದ್ದು, ನಿರ್ದೇಶಕ ವಿಜಯ್ ನಾಗೇಂದ್ರ ಸಖತ್ ಮಾಸ್ ಮೂವಿಯೊಂದನ್ನು ನೀಡಿದ್ದಾರೆ.