ಪ್ರಜಾಸ್ತ್ರ ಸುದ್ದಿ
ವಿಜಯಪುರ: ವಿಜಯಪುರ ನಗರದ ಬಸ್ ನಿಲ್ದಾಣದ ಎದುರು ಶಿಕ್ಷಕಿಯೊಬ್ಬರು ಮರೆತು ಹೋಗಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ಹಣ ಇದ್ದ ಬ್ಯಾಗ್ ನ್ನು ಮಹಿಳೆಯ ಸಂಬಂಧಿಕರಿಗೆ ಮರಳಿಸುವ ಮೂಲಕ ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾರೆ.
ನೌಶಾದ್ ಬೇಗಂ ಶೇಖ್ ಎಂಬುವರಿಗೆ ಸೇರಿದ್ದ ಬ್ಯಾಗ್ ಇದಾಗಿದೆ. ಸಿಂದಗಿ ತಾಲೂಕಿನ ಕೋರವಾರ ಗ್ರಾಮದವರಾದ ಇವರು, ಗದಗ ಜಿಲ್ಲೆಯ ಪ್ರೌಢಶಾಲೆವೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ನವಲಗುಂದದಿಂದ ಬುಧವಾರ ಸಂಜೆ ವಿಜಯಪುರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ನಂತರ ಸಂಬಂಧಿಕರಿನಲ್ಲಿ ತೆರಳಿದ್ದಾರೆ. ಹೀಗೆ ಹೋಗುವಾಗ ತಾವು ತಂದಿದ್ದ ಬ್ಯಾಗ್ ಗಳಲ್ಲಿ 60 ಗ್ರಾಂ ಚಿನ್ನಾಭರಣ, 5 ಸಾವಿರ ರೂಪಾಯಿ ನಗದು ಇದ್ದ ಬ್ಯಾಗ್ ಬಿಟ್ಟು ಮರೆತು ಹೋಗಿದ್ದಾರೆ.
ಕೋರವಾರ ಗ್ರಾಮಕ್ಕೆ ಬಂದ ಬಳಿಕ ಬ್ಯಾಗ್ ಪರಿಶೀಲನೆ ಮಾಡಿದಾಗ, ಚಿನ್ನಾಭರಣವಿದ್ದ ಬ್ಯಾಗ್ ಮಿಸ್ ಆಗಿರುವುದು ತಿಳಿದಿದೆ. ವಿಜಯಪುರದಲ್ಲಿರುವ ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅವರು ಬಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಬ್ಯಾಗ್ ಹುಡುಕಾಟ ನಡೆಸಿದ್ದಾರೆ. ಆಟೋ ಚಾಲಕರಾದ ಅಲ್ಲಾಭಕ್ಷ ಶೇಖ್, ಶಬ್ಬೀರ್ ಕಲಾದಗಿ ಹಾಗೂ ಶಿವಾಜಿ ಪವಾರ ಎಂಬುವರು ಮಹಿಳೆ ಬಿಟ್ಟು ಹೋಗಿದ್ದ ಬ್ಯಾಗನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ಯಾಗ್ ಮರಳಿಸಿದ ಆಟೋ ಚಾಲಕರಿಗೆ ಬಹುಮಾನವಾಗಿ ಹಣ ನೀಡಲು ಹೋದರೂ ಅವರು ಸ್ವೀಕರಿಸಲಿಲ್ಲ ಎಂದು ಶಿಕ್ಷಕಿ ನೌಶಾದ್ ಬೇಗಂ ಮಾಹಿತಿ ಹಂಚಿಕೊಂಡಿದ್ದಾರೆ.