ಪ್ರಜಾಸ್ತ್ರ ಅಪರಾಧ ಸುದ್ದಿ
ಹಾಸನ: ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಂಪತಿ ಜೊತೆಯಾಗಿ ಇರುವುದಾಗಿ ಒಪ್ಪಿಕೊಂಡಿತು. ಆದರೆ, ಇದಾದ ಮೇಲೆ ಶೌಚಾಲಯದಲ್ಲೇ ಪತ್ನಿಯ ಕತ್ತು ಕೊಯ್ದು ಪತಿ ಹತ್ಯೆ ಮಾಡಿರುದ ಭೀಕರ ಘಟನೆ ಹಾಸನದಲ್ಲಿ ನಡೆದಿದೆ.
ಇಷ್ಟು ಮಾತ್ರವಲ್ಲದೇ ಮಗುವನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. ಚೈತ್ರಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ದೈವಿ. ಈಕೆ ಪತಿ ಶಿವಕುಮಾರ್ ಈ ಕೃತ್ಯ ನಡೆಸಿದ ಪಾಪಿಯಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚೈತ್ರಾ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ದಂಪತಿ ನಡುವೆ ವೈಮನಸ್ಸು ಮೂಡಿ ದೂರವಾಗಿದ್ದರು. ಡಿವೋರ್ಸ್ ಗಾಗಿ ಚೈತ್ರಾ ಅರ್ಜಿ ಸಲ್ಲಿಸಿದ್ದರು. ಹೊಳೆನರಸೀಪುರ ತಾಲೂಕಿನ ಹಿರಿಯ ಸಿವಿಲ್ ಕೋರ್ಟ್ ನಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ನ್ಯಾಯಾಧೀಶರು, ವಕೀಲರ ಮುಂದೆ ಪತ್ನಿ ಹಾಗೂ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾನೆ.
ಸಂಸಾರ ಅಂದರೆ ಇದೆಲ್ಲ ನಡೆಯುವುದು. ಈಗಲಾದರೂ ಒಂದಾದರಲ್ಲ ಎಂದುಕೊಳ್ಳುವಷ್ಟರಲ್ಲಿ ಕ್ರೂರಿ ಶಿವಕುಮಾರ್, ಪತ್ನಿ ಚೈತ್ರಾ ಶೌಚಾಲಯಕ್ಕೆ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ತೀವ್ರವಾಗಿ ದಾಳಿ ಮಾಡಿದ್ದಾನೆ. ಗಂಭೀರ ಗಾಯಗೊಂಡಿದ್ದ ಚೈತ್ರಾಳನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.