ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ನಲ್ಲಿ ಬಿರುಕು ಮೂಡಿದೆ. ಸ್ವತಃ ರಾಜ್ಯಾಧ್ಯಕ್ಷರೇ ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೀಗಾಗಿ ಇಂದು ಕೋರ್ ಕಮಿಟಿ, ಪರಿಷತ್ ಸದಸ್ಯರು, ಜಿಲ್ಲಾ ಮಟ್ಟದ ಮುಖಂಡರ ಸಭೆ ಕರೆಯಲಾಗಿದೆ.
ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಲ್ ಬೋಜೇಗೌಡ ಕರೆದಿರುವ ಈ ಸಭೆಗೆ ರಾಜ್ಯಾಧ್ಯಕ್ಷರನ್ನೇ ಆಹ್ವಾನಿಸಿಲ್ಲ. ಹೀಗಾಗಿ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ನಮ್ಮದೆ ಓರಿಜಿನಲ್ ಜೆಡಿಎಸ್ ಎಂದು ಹೇಳಿದ ಸಿ.ಎಂ ಇಬ್ರಾಹಿಂ, ಕುಮಾರಸ್ವಾಮಿ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡುವ ಕುರಿತು ಮಾತನಾಡಿದ್ದರು. ಇದರ ನಡುವೆ ಉಚ್ಛಾಟನೆಯ ನಕಲಿ ಆದೇಶ ಪ್ರತಿ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಈಗ ನೋಡಿದರೆ ಸಿ.ಎಂ ಇಬ್ರಾಹಿಂ ಅವರನ್ನೇ ಪಕ್ಷದಿಂದ ಹೊರ ದಬ್ಬುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಂದಿನ ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಆಂತರಿಕ ಕಚ್ಚಾಟ ಯಾವ ಹಂತಕ್ಕೆ ಹೋಗುತ್ತೆ ಅನ್ನೋದು ತಿಳಿಯುತ್ತೆ.