ಬೆಂಗಳೂರು : ಮಗನ ಸ್ಕೂಲ್ ಫೀಸ್ ಕಟ್ಟಲು ಡ್ರಾ ಮಾಡಿದ್ದ ಹಣವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಭಟ್ಟರಹಳ್ಳಿಯ ಉಡುಪಿ ಗಾರ್ಡನ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಶ್ರೀನಾಥ್ ಎಂಬವವರು, ಮಗನ ಸ್ಕೂಲ್ ಗೆ ಹಣ ಕಟ್ಟಲು, ಆವಲಹಳ್ಳಿ ಬಳಿಯ ಬ್ಯಾಂಕ್ ಆಫ್ ಇಂಡಿಯಾದಿಂದ 48 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.
ಶ್ರೀನಾಥ್, ಪತ್ನಿ ಹಾಗೂ ಮಗನೊಂದಿಗೆ ಊಟ ಮಾಡಲು ಉಡುಪಿ ಗಾರ್ಡನ್ ಹೋಟೆಲ್ ಗೆ ಹೋಗಿದ್ದಾರೆ. ಹೋಗುವಾಗ ಹಣವನ್ನ ಆ್ಯಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ಇದನ್ನು ನೋಡಿದ ಕಳ್ಳರು, ಅವರು ಹೋಟೆಲ್ ಒಳಗೆ ಹೋಗ್ತಿದ್ದಂತೆ, ಹಣ ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗನ ಸ್ಕೂಲ್ ಫೀಸ್ ಕಟ್ಟಲು ತಂದಿದ್ದ ಹಣ ಕಳ್ಳರ ಪಾಲಾಗಿದ್ದಕ್ಕೆ ದಂಪತಿ ಕಣ್ಣೀರು ಹಾಕ್ತಿದ್ದಾರೆ. ಶ್ರೀನಾಥ್ ಹಣ ಡ್ರಾ ಮಾಡಿದ್ದನ್ನ ನೋಡಿರುವ ಕಳ್ಳರು, ಅವರನ್ನ 2 ಕಿಲೋ ಮೀಟರ್ ವರಗೆ ಹಿಂಬಾಲಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಬಗ್ಗೆ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಪಡೆದಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.