ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಅಖಾಡದಲ್ಲಿ ಕುಟುಂಬ ರಾಜಕಾರಣ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಅಪ್ಪ ಮಕ್ಕಳು ಕಣದಲ್ಲಿ ಇರಲು ಸಜ್ಜಾಗಿದ್ದಾರೆ. ತಂದೆ, ತಾಯಿ ಒಂದು ಕ್ಷೇತ್ರವಾದರೆ ಮಗ, ಮಗಳು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ರೆಡಿಯಾಗುತ್ತಿದ್ದು, ಅವರಿಗೆ ಟಿಕೆಟ್ ಕೊಡಿಸಲು ಹೆತ್ತವರು ಹೈಕಮಾಂಡ್ ಜೊತೆಗೆ ಸಭೆ ನಡೆಸುತ್ತಲೇ ಇದ್ದಾರೆ.
ಯಡಿಯೂರಪ್ಪ ಸ್ಪರ್ಧಿಸದೆ ಇರುವುದರಿಂದ ಶಿಕಾರಿಪುರದಿಂದ ಮಗ ವಿಜಯೇಂದ್ರಗೆ ಸ್ಪರ್ಧಿಸಲು ಟಿಕೆಟ್ ಕೇಳುತ್ತಿದ್ದಾರೆ. ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಿಂದ ಪುತ್ರ ಕಾಂತೇಶ್, ಎಂ.ಟಿ.ಬಿ ನಾಗರಾಜ್ ಮಗ ಪುರುಷೋತ್ತಮಗೆ, ದಿವಂಗತ ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿಗೆ, ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ. ವಿ.ಸೋಮಣ್ಣ ಮಗ ಡಾ.ಅರುಣಗೆ, ಜಿ.ಎಚ್ ತಿಪ್ಪಾರೆಡ್ಡಿ ಪುತ್ರ ಡಾ.ಸಿದ್ಧಾರ್ಥಗೆ ಟಿಕೆಟ್ ನೀಡಬೇಕೆಂದು ಫೈಟ್ ನಡೆಸಿದ್ದಾರೆ.
ಹೀಗೆ ಎಲ್ಲಿ ನೋಡಿದರೆ ಕುಟುಂಬದಿಂದ ಇಬ್ಬರು, ಮೂವರು ಸ್ಪರ್ಧಿಸುವ ಮೂಲಕ ವಿಧಾನಸೌಧದ ತುಂಬಾ ತಾವೇ ತುಂಬಿಕೊಂಡಿರಬೇಕು ಅನ್ನೋ ಹೆಚ್ಚುತನ ತುಂಬಿಕೊಂಡಿದೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ಕುಟುಂಬ ರಾಜಕಾರಣದಿಂದಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರು, ಮುಖಂಡರು ಶಾಸಕರಾಗುವುದು ಕನಸಿನ ಮಾತಾಗಿದೆ. ಅವರನ್ನು ಗ್ರಾಮ, ತಾಲೂಕು, ಜಿಲ್ಲಾ, ಪುರಸಭೆ, ನಗರಸಭೆ ಸದಸ್ಯರನ್ನಾಗಿ ಮಾಡಿ ಅಲ್ಲಿಗೆ ಅವರ ರಾಜಕೀಯ ಭವಿಷ್ಯ ಕೊನೆಗಾಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿರುತ್ತೆ ಅನ್ನೋದು ಲಿಸ್ಟ್ ಬಂದ ಮೇಲೆ ತಿಳಿಯುತ್ತೆ.