ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ನನ್ನನ್ನು ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನ ಸುಮರು 50 ಮುಖಂಡರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ಕೇವಲ 10 ದಿನ ಬಾಕಿ ಉಳಿದಿದೆ. ನಮಗೆ ಪ್ರತಿ ಕ್ಷಣವೂ ಮುಖ್ಯ. ಆದರೆ, ನಮಗೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗದಂತೆ ಮಾಡಲು ಸಂಚು ರೂಪಿಸಲಾಗಿದೆ. ರಾಜ್ಯದ 50 ಮುಖಂಡರ ಮನೆಯ ಮೇಲೆ ಇನ್ನೆರಡು ದಿನಗಳಲ್ಲಿ ಲೋಕಾಯುಕ್ತರು ದಾಳಿ ನಡೆಸುವ ಮಾಹಿತಿ ಸಿಕ್ಕಿದೆ ಎಂದರು.
ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳಬೇಕು. ಅದನ್ನು ಬಿಟ್ಟು ವಾಮಮಾರ್ಗ ಹಿಡಿಯಬಾರದು. ನನ್ನ ಸೋಲು ಗೆಲುವು ಗ್ರಾಮೀಣ ಕ್ಷೇತ್ರದ ಜನರ ಕೈಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಜನರು ಸಂಪೂರ್ಣವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಜನರು ಹೈರಾಣಾಗಿದ್ದು, ಕಾಂಗ್ರೆಸ್ ಜನಪ್ರಿಯ ಪ್ರಣಾಳಿಕೆಗೆ ಮತದಾರರು ಆಶೀರ್ವಾದ ಮಾಡುತ್ತಾರೆ ಅಂತಾ ಹೇಳಿದರು.