ಬೆಂಗಳೂರು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ವಾಧಿಕಾರಿಯಂತೆ ವರ್ತಿಸ್ತಿದ್ದಾರೆ ಅನ್ನೋದು ಕಂಡು ಬರ್ತಿದೆ. ಮೊದಲಲಿಗೆ ಅಧಿವೇಶನಕ್ಕೆ ಕ್ಯಾಮೆರಾಗೆ ಬ್ರೇಕ್ ಹಾಕಿದ್ರು. ನಂತರ ಶಾಸಕರ ಭವನಕ್ಕೆ ಮೀಡಿಯಾದವರ ನಿರ್ಬಂಧ ಹೇರಿದ್ರು. ಇದೀಗ ವಿಧಾನಸೌಧದ ಮೊಗಸಾಲೆಗೂ ಬರಬಾರದು ಅನ್ನೋ ಮೌಖಿಕ ಆದೇಶ ನೀಡಿ, ವಾಪಸ್ ಪಡೆದಿದ್ದಾರೆ.
60 ವರ್ಷದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದ ಸ್ಪೀಕರ್
ಇಂದು ಬೆಳಗ್ಗೆ ಸ್ಪೀಕರ್ ಕಾಗೇರಿ, ವಿಧಾನಸೌಧದ ಮೊಗಸಾಲೆಗೆ ಮೀಡಿಯಾದವರು ಬರಬಾರದು ಎಂದು ಮೌಖಿಕವಾಗಿ ಆದೇಶಿಸಿದ್ರು. ಹೀಗಾಗಿ ಮಾರ್ಷಲ್ ಗಳು ಆಡಳಿತ ಹಾಗೂ ವಿಪಕ್ಷಗಳ ಮೊಗಸಾಲೆಗಳಲ್ಲಿನ ಪತ್ರಕರ್ತರನ್ನ, ಕ್ಯಾಂಟೀನ್ ನಲ್ಲಿ ತಿಂಡಿ, ಊಟ ಮಾಡ್ತಿದ್ದ ಪತ್ರಕರ್ತರನ್ನ ಹೊರಡಲು ಸೂಚಿಸಿದ್ರು. ಈ ಮೂಲಕ 60 ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ರು. ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸ್ತಿದ್ದಂತೆ ಆದೇಶ ಹಿಂದಕ್ಕೆ ಪಡೆದಿದ್ದಾರೆ.
ಸಭಾಧ್ಯಕ್ಷರ ಈ ನಡೆ ಸಾಕಷ್ಟು ಚರ್ಚೆಗೆ ಕಾರಣವಾಯ್ತು. ಮೀಡಿಯಾದವರನ್ನ ದೂರವಿಟ್ಟು ಏನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ರು. ಬಳಿಕ ಸಚಿವರ, ಶಾಸಕರ ಆಪ್ತ ಸಹಾಯಕರಿಗೆ ನಿರ್ಬಂಧ. ಪತ್ರಕರ್ತರಿಗಲ್ಲ ಎಂದು ಮಾರ್ಷಲ್ ಗಳ ಮೂಲಕ ಹೇಳಿ ಕಳುಹಿಸಿದ್ರು. ಕಾಗೇರಿ ಅವರ ಈ ವರ್ತನೆ ನೋಡಿದ್ರೆ ಮೀಡಿಯಾದವರನ್ನ ವಿಧಾನಸೌಧದ ಗೇಟ್ ಮುಂದೆಯೇ ತಡೆದು ನಿಲ್ಲಿಸುವ ಪ್ಲಾನ್ ಇದ್ಯಾ ಅನ್ನೋ ಅನುಮಾನ ಮೂಡಿದೆ.