ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಹೆಸರು ಮಾಡಿರುವ ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದಿಂದ ರಕ್ತದ ಓಕುಳಿ ಹರಿಯುತ್ತಿದೆ. ನಿನ್ನೆ ತಡರಾತ್ರಿ ಹುಬ್ಬಳ್ಳಿಯಲ್ಲಿ ಯುವಕನೊಬ್ಬನ ಹತ್ಯೆಯಾಗಿದೆ.
ಹಳೇ ಹುಬ್ಬಳ್ಳಿಯ ಹಸಾರ ಓಣಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ 20 ವರ್ಷದ ಕರಣ ಶೆಟ್ಟಿ ಅನ್ನೋ ಯುವಕನಿಗೆ ಚಾಕು ಇರಿಯಲಾಗಿದೆ. ಇದ್ರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ. ರಾಹುಲ ಅನ್ನೋ ಯುವಕ ಕೃತ್ಯ ಎಸಗಿದ್ದಾನೆ ಅಂತಾ ಹೇಳಲಾಗ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ರು ಪರಿಶೀಲನೆ ನಡೆಸಿದ್ರು. ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದೊಂದು ವಾರದಿಂದ ಚಾಕು ಇರಿತದ ಮೂರನೇ ಪ್ರಕರಣವಾಗಿದೆ. ಮೊದಲ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ರು. ಎರಡನೇ ಪ್ರಕರಣದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ವು. ಇದೀಗ ಮತ್ತೊಂದು ಜೀವ ಹೋಗಿದೆ. ಇದ್ರಿಂದಾಗಿ ಹುಬ್ಬಳ್ಳಿ ಜನತೆ ಯಾವ ಟೈಂನಲ್ಲಿ ಏನಾಗುತ್ತೆ ಅನ್ನೋ ಭಯದಲ್ಲಿದ್ದಾರೆ.