ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧನ ಬಂಧನಕ್ಕೆ ಒಳಗಾಗಿರುವ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
ಕಳೆದ ಜುಲೈ 4ರಂದು ಬಂಧಿಸಲಾಗಿತ್ತು. 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿತ್ತು. ಹೀಗಾಗಿ ಇಂದು ನಾಲ್ವರು ಆರೋಪಿಗಳನ್ನು ಒಂದೇ ಎಸಿಎಂಎಂ ಕೋರ್ಟಿಗೆ ಹಾಜರು ಪಡಿಸಲಾಯಿತು. ಈ ವೇಳೆ ಸಿಐಡಿ ಪರ ವಕೀಲರು 6 ದಿನ ಕಸ್ಟಡಿಗೆ ನೀಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಪೌಲ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ತನಿಖೆ ಮುಗಿದಿದ್ದರೆ ನಾವು ಕೇಳುತ್ತಿರಲಿಲ್ಲ. ನೇಮಕಾತಿ ವಿಭಾಗದ ಮುಖ್ಯಸ್ಥರು ಅವರೆ ಆಗಿದ್ದರು. ಟ್ಯಾಂಪರಿಂಗ್ ಹೇಗಾಯಿತು ಎಂದು ಅವರೆ ಹೇಳಬೇಕು. ಈಗ ಅವರು ನೀಡಿರುವ ಐಪೋನ್ ಪಾಸ್ವರ್ಡ್ ನೀಡಿದ್ದಾರೆ. ಆದರೆ, ಫಾರ್ಮ್ಯಾಟ್ ಮಾಡಲಾಗಿದೆ. ಹೀಗಾಗಿ ಕ್ಲೌಡ್ ಗೆ ಹಾಕಿ ಡೇಟಾ ರಿಕವರಿ ಮಾಡಿಕೊಳ್ಳಬೇಕು. ಅಲ್ಲದೇ ಪೌಲ್ ಗೆ 1.36 ಕೋಟಿ ರೂಪಾಯಿ ನೀಡಿರುವುದಾಗಿ ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಹೇಳಿದ್ದು ಇದೆಲ್ಲದರ ತನಿಖೆಯಾಗಬೇಕು ಎಂದರು.
ಎರಡು ಕಡೆ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿದರು. ಒಂದು ದಿನದಲ್ಲಿ ಗರಿಷ್ಠ 30 ನಿಮಿಷ ವೈದ್ಯರಿಗೆ ಹಾಗೂ ಕುಟುಂಬಸ್ಥರಿಗೆ ಭೇಟಿಯಾಗಲು ಅವಕಾಶ ನೀಡಿದರು. ಉಳಿದ ಆರೋಪಿಗಳಾದ ಹರ್ಷ, ಶ್ರೀಧರ್, ಶಾಂತಕುಮಾರನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.