ವಿಜಯಪುರ: ಇಂದು ಸಂಜೆ ವಿಜಯಪುರ, ಸಿಂದಗಿ, ಜೇವರ್ಗಿ, ಆಲಮೇಲ, ಚಾಂದಕೋಟಿ ಸೇರಿದಂತೆ ಹಲವು ಕಡೆ ಭರ್ಜರಿ ಮಳೆಯಾಗಿದೆ. ರಣರಣ ಬಿಸಿಲಿನಿಂದ ಹೈರಾಣಾಗಿದ್ದ ಜನಕ್ಕೆ ಈ ಮಳೆ ಒಂದಿಷ್ಟು ತಂಪು ಎರೆದಿದೆ. ಇದರ ಜೊತೆಗೆ ಒಂದಿಷ್ಟು ಅನಾಹುತಗಳನ್ನ ಸೃಷ್ಟಿಸಿದ್ದು, ಮೂಕ ಪ್ರಾಣಿಗಳು ಸಾವನ್ನಪ್ಪಿವೆ.
ಚಾಂದಕೋಟೆ ಗ್ರಾಮದ ಪರಮಾನಂದ ಹೈಸ್ಕೂಲ್ ಆವರಣದಲ್ಲಿರುವ ಆಲದ ಮರದ ಆಶ್ರಯದಲ್ಲಿ ನಿಂತಿದ್ದ ಅಲೆಮಾರಿ ವ್ಯಾಪಾರಿ ಕುಟುಂಬದ ಮೇಲೆ ಮರ ಉರುಳಿ ಬಿದ್ದಿದೆ. ಇದರ ಪರಿಣಾಮ ಎರಡು ಕುದುರೆಗಳು ಹಾಗೂ ಐದು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ನಾಲ್ಕು ಕುದುರೆಗಳಿಗೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇನ್ನು ಜೇವರ್ಗಿಯಲ್ಲಿ ಬೀಸಿದ ಬಿರುಗಾಳಿಗೆ ಬೈಕ್ ಸವಾರನೊಬ್ಬನಿಗೆ ಸಿಂಟೆಕ್ಸ್ ಹಾರಿ ಬಂದು ಬಡೆದಿದೆ. ಇದರಿಂದಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಒಂದ್ಕಡೆ ಮಳೆ ಬಂದ ಖುಷಿ ಇದ್ದರೆ, ಇನ್ನೊಂದ್ಕಡೆ ಜೀವಹಾನಿ ಆಗಿರೋ ನೋವು ಇದೆ.