ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಸರಿಯಾಗಿ ಮಳೆ ಆಗಿರಲಿಲ್ಲ. ಹೀಗಾಗಿ ಬರಗಾಲದ ಛಾಲೆ ಎಲ್ಲೆಡೆ ಆವರಿಸಿಕೊಂಡಿತ್ತು. ರಾಜ್ಯ ಸರ್ಕಾರ ಘೋಷಿಸುವ ಬರಗಾಲದ ತಾಲೂಕುಗಳಲ್ಲಿ ಜಿಲ್ಲೆಯ 8 ತಾಲೂಕುಗಳಲ್ಲಿ ಬಹುತೇಕ ತಾಲೂಕುಗಳ ಹೆಸರಿವೆ. ಇದೀಗ ಶನಿವಾರ, ಭಾನುವಾರ ಹಾಗೂ ಸೋಮವಾರ ಮುಂಜಾನೆಯಿಂದ ಎಲ್ಲೆಡೆ ಮಳೆ ಕಾಣಿಸಿಕೊಂಡಿದೆ.
ಜಿಲ್ಲೆಯ ಬಹುತೇಕ ಕಡೆ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಳೆಗಾಲದಲ್ಲೂ ಸೂರ್ಯನ ತಾಪಕ್ಕೆ ಜನರು ಕಂಗಾಲಾಗಿದ್ದರು. ಆದರೆ, ಕೊನೆಗೂ ಮಳೆರಾಯ ಕಣ್ಣು ಬಿಟ್ಟಿದ್ದು, ಭೂಮಿಯನ್ನು ತಂಪಾಗಿಸಿದ್ದಾನೆ. ಭಾನುವಾರ ಸಂಜೆಯಿಂದಲೇ ಭರ್ಜರಿ ಮಳೆಯಾಗುತ್ತಿದೆ.
ವಿಜಯಪುರ, ಮುದ್ದೇಬಿಹಾಳ, ಕೊಲ್ಹಾರ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ, ತಾಳಿಕೋಟಿ, ಕಲಕೇರಿ, ಸಿಂದಗಿ, ಇಂಡಿ, ಚಡಚಣ, ಸೇರಿದಂತೆ ಬಹುತೇಕ ತಾಲೂಕಿನಲ್ಲಿ ಮಳೆ ಕಾಣಿಸಿಕೊಂಡಿದೆ. ಒಣಗಿ ನಿಂತಿದ್ದ ಬೆಳೆಗಳಿಗೆ ಮರಜೀವ ಬಂದಂತಾಗಿದೆ.
ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದೆ. ಹೀಗಾಗಿ ಜನರಲ್ಲಿ ಒಂದಿಷ್ಟು ಮಂದಹಾಸ ಮೂಡಿದೆ. ಬೆಳೆಗಳು ಒಣಗುತ್ತಿರುವುದಕ್ಕೆ ಕಣ್ಣೀರು ಹಾಕುತ್ತಿದ್ದ ರೈತರೂ ಸ್ವಲ್ಪ ನಿರಾಳರಾಗಿದ್ದಾರೆ. ಉತ್ತಮ ಮಳೆಯಾದರೆ ಸಾಕಪ್ಪ ಎಂದು ದೇವರಿಗೆ ಕೈ ಮುಗಿಯುತ್ತಿದ್ದಾರೆ.