ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ್ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ಇತ್ತೀಚೆಗೆ ನಡೆಸಿದ ರೌಡಿ ಶೀಟರ್ ಗಳ ಮನೆಗಳ ಮೇಲಿನ ದಾಳಿ ವೇಳೆ ಹೇಳಿದ್ದರು. ಆದರೆ, ಭಾನುವಾರ ಸೈಲೆಂಟ್ ಸುನೀಲ್ ದೊಡ್ಡದಾದ ಕಾರ್ಯಕ್ರಮ ಮಾಡಿದ್ದಾನೆ. ಇದರಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ.
ಕೊಲೆ, ಕೊಲೆ ಯತ್ನ, ದರೋಡೆ ಯತ್ನ ಸೇರಿದಂತೆ ಸುಮಾರು 20 ಪ್ರಕರಣಗಳು ಇತನ ಮೇಲಿವೆ. ಸಿಲಿಕಾನ್ ಸಿಟಿಯ ಕುಖ್ಯಾತ ರೌಡಿ ಶೀಟರ್ ಗಳಲ್ಲಿ ಸೈಲೆಂಟ್ ಸುನೀಲ್ ಸಹ ಒಬ್ಬ. ಇಂತಹ ಸೈಲೆಂಟ್ ಸುನೀಲ್ ಪೊಲೀಸರಿಗೆ ಬೇಕಾಗಿದ್ದಾನೆ. ಭಾನುವಾರ ಬಹಿರಂಗವಾಗಿಯೇ ಕಾರ್ಯಕ್ರಮ ಮಾಡಿದರೂ ಸಿಸಿಬಿ ಪೊಲೀಸರು ಸೈಲೆಂಟ್ ಆಗಿದ್ಯಾಕೆ? ಎಸ್ಕೋರ್ಟ್ ಮೂಲಕ ಸೈಲೆಂಟ್ ಸುನೀಲ್ ನನ್ನು ಪೊಲೀಸರೆ ಕರೆದುಕೊಂಡು ಹೋದರು ಅನ್ನೋ ಮಾತುಗಳಿವೆ.
ಓರ್ವ ರೌಡಿ ಶೀಟರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾನೆ. ಇದು ತಮಗೆ ಅರಿವಿಲ್ಲದೆ ನಡೆದ ಕಾರ್ಯಕ್ರಮ ಎಂದು ಸಂಸದ ಪಿ.ಸಿ ಮೋಹನ್ ಹೇಳಿ ಜಾರಿಕೊಂಡಿದ್ದಾರೆ. ಇದು ವಿಪಕ್ಷಗಳಿಗೆ ಅಸ್ತ್ರವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.