ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ಮಾಫಿಯಾ ಇದೆ. ಕೆಲವು ನಟ, ನಟಿಯರು ಡ್ರಗ್ಸ್ ತೆಗೆದುಕೊಳ್ತಿದ್ದಾರೆ. ಡ್ರಗ್ಸ್ ಕಿಂಗ್ ಪಿನ್ ಅನಿಕಾ ಸಪ್ಲೈ ಮಾಡ್ತಿದ್ದಳು ಅನ್ನೋದು ತಿಳಿದು ಬಂದಿದೆ. ಇದರ ನಡುವೆ ನಿರ್ದೇಶ ಇಂದ್ರಜೀತ ಸುಮಾರು 10 ರಿಂದ 15 ಜನರ ಹೆಸರು ತನಿಖಾಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದಿದ್ದಾರೆ.
ಇಂದ್ರಜೀತ ಜೊತೆಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರನ್ನ ಎಲೆಕ್ಟ್ರಾನಿಕ್ ಮೀಡಿಯಾಗಳು ಮಾತ್ನಾಡಿಸಿದ್ದು, ಅವರು ಅವರದೆ ಶೈಲಿಯಲ್ಲಿ ಮಾತ್ನಾಡಿದ್ದಾರೆ. ಜೊತೆಗೆ ಇಂದ್ರಜೀತ ವಿಚಾರವಾಗಿ ಕಿಂಡಲ್ ಮಾಡಿದ್ದು, ಅದು ಅವರಿಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಅದೇನು ಅನ್ನೋದು ಅವರಿಬ್ಬರ ವೈಯಕ್ತಿ ವಿಚಾರ.
ಈ ಇಬ್ಬರ ವಾಕ್ಸಮರವನ್ನೇ ಮತ್ತೊಂದು ಆ್ಯಂಗಲ್ ಸ್ಟೋರಿ ಮಾಡಿಕೊಂಡು ಡ್ರಗ್ಸ್ ವಿಚಾರವನ್ನೇ ಕನ್ನಡದ ಟಿವಿ ಚಾನೆಲ್ ಗಳು ಮರೆಯುತ್ತಿವೆ. ಡ್ರಗ್ಸ್ ದಂಧೆ ಬಗ್ಗೆ ಪೊಲೀಸ್ ಅಧಿಕಾರಿಗಳನ್ನ ಗಟ್ಟಿಯಾಗಿ ಪ್ರಶ್ನೆ ಮಾಡಿ, ಯಾರು ಆ ನಟ, ನಟಿಯರು, ಶ್ರೀಮಂತರ ಮಕ್ಕಳು ಎಂದು ಕೇಳುತ್ತಿಲ್ಲ. ಅದನ್ನ ಬಿಟ್ಟು ಇಂದ್ರಜೀತ-ಬೆಳಗೆರೆಯವರನ್ನ ಕೇಳ್ತಾ ಜನರಲ್ಲಿ ಇನ್ನಷ್ಟು ಇಲ್ಲಸಲ್ಲದ ಅನುಮಾನಗಳಿಗೆ ದಾರಿ ಮಾಡಿಕೊಡ್ತಿದ್ದಾರೆ.
ಸಾಮಾಜಿಕ ಕಳಕಳಿಯಿಂದ, ಚಿತ್ರರಂಗದ ದೃಷ್ಟಿಯಿಂದ ಮಾಹಿತಿ ನೀಡಿದ್ದೇನೆ ಎಂದಿರುವ ಇಂದ್ರಜೀತ ಆಗ್ಲಿ, ಈ ಬಗ್ಗೆ ಚಾನೆಲ್ ಗಳು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬೆಳಗೆರೆಯಾಗ್ಲಿ ಉತ್ತರ ನೀಡುವುದು ಅವರ ಕೆಲಸವಲ್ಲ. ಪೊಲೀಸರು, ತನಿಖಾಧಿಕಾರಿಗಳು, ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಉತ್ತರ ನೀಡಬೇಕಿದೆ. ಅವರನ್ನ ಕೇಳಬೇಕಿದೆ. ಅದನ್ನ ಬಿಟ್ಟು ಅವರಿಬ್ಬರನ್ನ ಹಿಡಿದುಕೊಂಡು ಇಡೀ ಸ್ಟೋರಿ ದಿಕ್ಕನ್ನೇ ತಪ್ಪಿಸಲು ಹೊರಟಿರುವುದುರ ಹಿಂದಿನ ಉದ್ದೇಶ ಏನು ಎಂದು ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.