ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆ, ಒಳಚರಂಡಿ ಕಾಮಗಾರಿ ಸೇರಿದಂತೆ ವಿವಿಧ ರೀತಿ ಕೆಲಸಗಳು ಏಕಕಾಲದಲ್ಲಿ ನಡೆದಿದ್ದು, ವಾಯ್ಯು ಮಾಲಿನ್ಯದಿಂದಾಗಿ ಜನರಲ್ಲಿ ವಿವಿಧ ರೀತಿಯ ಅನಾರೋಗ್ಯ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ‘ಪ್ರಜಾಸ್ತ್ರ ವೆಬ್ ಪತ್ರಿಕೆ’ ಗುರುವಾರವಷ್ಟೇ ವಿಶೇಷ ಲೇಖನ ಪ್ರಕಟಿಸಿತ್ತು.
ಪಟ್ಟಣದಲ್ಲಿ ಉಂಟಾಗಿರುವ ವಾಯ್ಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ಚೇತನ್ ಗುತ್ತೇದಾರ್ ಎಂಬುವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಫೆಬ್ರವರಿ 15ರಂದು ಪತ್ರ ಬರೆದಿದ್ದರು. ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ಗಮನ ಹರಿಸಿ ಮಾಲಿನ್ಯವಾಗದಂತೆ ಕಾಮಗಾರಿ ನಡೆಸುವ ಸಂಬಂಧ ಸೂಚನೆ ನೀಡಬೇಕು ಎಂದು ಪತ್ರ ಬರೆದಿದ್ದು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪುರಸಭೆಗೆ ನೋಟಿಸ್ ನೀಡಿದೆ.
ಪಟ್ಟಣದಲ್ಲಿ ಆಗುತ್ತಿರುವ ಕಾಮಗಾರಿಯಿಂದ ಸಾಕಷ್ಟು ವಾಯ್ಯು ಮಾಲಿನ್ಯ ಉಂಟಾಗುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಸಾಕಷ್ಟು ಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಚಿಕ್ಕ ಮಕ್ಕಳು, ಹಿರಿಯರ ಆರೋಗ್ಯದ ಮೇಲೆ ಗಂಭೀರ ರೀತಿ ಪರಿಣಾಮ ಬೀರುತ್ತಿದೆ. ಅಭಿವೃದ್ಧಿ ಕೆಲಸದ ಜೊತೆಗೆ ಜನರ ಆರೋಗ್ಯದ ಕಡೆ ಗಮನ ಹರಿಸಬೇಕಲ್ಲವಾ?
ಚೇತನ್ ಗುತ್ತೇದಾರ್, ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದ ಸ್ಥಳೀಯರು
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ..
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬರವಣಿಗೆಯಲ್ಲಿ ಯಾವುದೇ ನೋಟಿಸ್ ಬಂದಿಲ್ಲ. ಮೇಲ್ ಮೂಲಕ ಸಹ ಬಂದಿಲ್ಲ. ಫೋನ್ ಮಾಡಿ ಹೇಳಿದ್ದಾರೆ. ಈ ಕುರಿತು ಪಿಡಬ್ಲುಡಿಗೆ ನೀರು ಹೊಡೆಯಲು ನಾವು ಪತ್ರವನ್ನು ಬರೆದಿದ್ದೇವೆ.
ರಾಜಶ್ರೀ ತುಂಗಳ, ಪುರಸಭೆ ಮುಖ್ಯಾಧಿಕಾರಿ, ಸಿಂದಗಿ
ಚೇತನ್ ಗುತ್ತೇದಾರ್ ಎಂಬುವವರು ಸಲ್ಲಿಸಿದ ಪತ್ರಕ್ಕೆ ಸಂಬಂಧಿಸಿದಂತೆ ಪುರಸಭೆಗೆ ನೋಟಿಸ್ ನೀಡಲಾಗಿದೆ. ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಮೇಲೆ ಯಾವುದೇ ರೀತಿಯಿಂದ ಪರಿಣಾಮವಾಗದಂತೆ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವಂತೆ ತಿಳಿಸಲಾಗಿದೆ. ಈ ಕುರಿತು ವರದಿ ಸಲ್ಲಿಸುವಂತೆ ಫೆಬ್ರವರಿ 16ರಂದು ತಿಳಿಸಲಾಗಿದೆ. ಜೊತೆಗೆ ಡಿಯುಡಿಸಿಗೂ ಮೇಲ್ ಮಾಡಲಾಗಿದೆ. ಆದರೆ ಇಲ್ಲಿ ನೋಟಿಸ್ ಬಂದಿಲ್ಲ ಎನ್ನುವುದಕ್ಕಿಂತ ಮುಖ್ಯವಾಗಿ ಇಲ್ಲಿರುವ ಪ್ರಶ್ನೆ ಪಟ್ಟಣದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವಾಯ್ಯು ಮಾಲಿನ್ಯವಾಗುತ್ತಿದ್ದರೂ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಹೋಗಿರುವುದು ದುರಂತ. ಈಗ್ಲಾದರೂ ಧೂಳಿಗೆ ಮುಕ್ತಿ ಕೊಟ್ಟು ಜನರ ಆರೋಗ್ಯ ಕಾಪಾಡುತ್ತಾರ ಕಾದು ನೋಡಬೇಕಿದೆ.