ಸಿಂದಗಿ: ಸಮಯ 9 ಗಂಟೆಯಾಗುತ್ತಾ ಬಂದ್ರೂ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಯಾಕಂದ್ರೆ, ಇಂದು ಬೆಳಗ್ಗೆ 8 ಗಂಟೆ 4 ನಿಮಿಷದಿಂದ ಕಂಕಣ ಸೂರ್ಯ ಗ್ರಹಣ ಶುರುವಾಗಿದೆ. ಇದ್ರಿಂದಾಗಿ ಸಾರ್ವಜನಿಕರು ಈ ವೇಳೆ ಏನೂ ತಿನ್ನದೆ, ಕುಡಿಯದೆ, ಅಷ್ಟೇ ಅಲ್ಲ ವ್ಯಾಪಾರ ವಹಿವಾಟು ಸಹ ಮಾಡದೆ ಸೈಲೆಂಟ್ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸಿಂದಗಿ ಪಟ್ಟಣ ಬಹುತೇಕ ಸ್ತಬ್ಧವಾಗಿದೆ.
ನಸುಕಿನ ಜಾವದಿಂದಲೇ ಸಣ್ಣಪುಟ್ಟ ಟೀ ಅಂಗಡಿಗಳು, ಹೋಟೆಲ್ ಗಳು, ಕಿರಾಣಿ ಅಂಗಡಿಗಳು ಸೇರಿದಂತೆ ದಿನಬಳಿಕೆ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ವ್ಯವಹಾರ ನಡೆಯುತಿತ್ತು. ಆದ್ರೆ, ಇಂದು ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿವೆ. ಇದ್ರಿಂದಾಗಿ ಪಟ್ಟಣದ ಪ್ರಮುಖ ರೋಡ್ ಗಳು ಜನರಿಲ್ಲದೆ ಖಾಲಿ ಖಾಲಿ ಕಾಣಿಸುತ್ತಿವೆ. ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಡುವುದು ಬಿಟ್ರೆ ಜನ ಸಂಚಾರ ಸಹ ಕಾಣಿಸ್ತಿಲ್ಲ.
ಇನ್ನು ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೆಲವು ಶಾಲೆಗಳು ಮಧ್ಯಾಹ್ನ 1 ಗಂಟೆಯ ನಂತ್ರ ಅಂದ್ರೆ ಗ್ರಹಣ ಮುಗಿದ್ಮೇಲೆ ಶಾಲೆಗಳನ್ನ ನಡೆಸಲಾಗುತ್ತೆ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಕಾಲೇಜ್ ರೋಡ್, ಬಸವೇಶ್ವರ ಸರ್ಕಲ್, ಆರ್ ಡಿ ಪಾಟೀಲ ಕಾಲೇಜ್ ರಸ್ತೆ, ವಿಜಯಪುರ ರಸ್ತೆ, ವಿವೇಕಾನಂದ ಸರ್ಕಲ್, ಸರ್ಕಾರಿ ಕಾಲೇಜ್ ರಸ್ತೆ, ಅಂಬೇಡ್ಕರ್ ಸರ್ಕಲ್, ಗಾಂಧಿ ಚೌಕ್ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಕಂಡು ಬರುತ್ತಿವೆ.
ಗ್ರಹಣದ ಟೈಂನಲ್ಲಿ ಯಾವುದೇ ಕೆಲಸ ಕಾರ್ಯಗಳನ್ನ ಮಾಡಬಾರದು ಅನ್ನೋ ನಂಬಿಕೆಯಿಂದ ಎಲ್ಲವೂ ಸ್ತಬ್ಧವಾಗಿವೆ. 11 ಗಂಟೆ 5 ನಿಮಿಷಕ್ಕೆ ಗ್ರಹಣ ಮುಗಿಯಲಿದೆ. ಇದಾದ್ಮೇಲೆ ಜನರು ಸ್ನಾನ ಮಾಡಿ ಪೂಜೆ ಮಾಡುವುದು, ಆಹಾರ ಸೇವಿಸುವುದು, ವ್ಯಾಪಾರ ವಹಿವಾಟು ಮಾಡುವುದು ನಡೆಯಲಿದೆ.