ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಸಿಂದಗಿ: ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿನಿ 625ಕ್ಕೆ 623 ಅಂಕ ಪಡೆದು ಶೇಕಡ 99.68ರಷ್ಟು ಸಾಧನೆ ಮಾಡಿದ್ದಾರೆ. ಈ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದಾಳೆ.
ಪಟ್ಟಣದ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ರಾಠೋಡ ಈ ಸಾಧನೆ ಮಾಡಿದ್ದಾಳೆ. ಇದು ಶಾಲೆ ಸೇರಿದಂತೆ ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸಿಂದಗಿ ತಾಲೂಕಿನ ಹಿಟ್ನಳ್ಳಿ ಗ್ರಾಮದ ಶಶಿಕಾಂತ ಹಾಗೂ ತಾರಾಬಾಯಿ ಅವರು ಪುತ್ರಿಯಾಗಿದ್ದು, ಮಗಳ ಈ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಷತಾ ತುಂಬಾ ಜಾಣೆಯಾಗಿದ್ದಳು. ಕಠಿಣ ಅಭ್ಯಾಸ ಮಾಡ್ತಿದ್ದಳು. ಮುಗ್ಧ ಸ್ವಭಾವದ ವಿದ್ಯಾರ್ಥಿನಿ, ಪ್ರತಿಯೊಂದರಲ್ಲಿಯೂ ಭಾಗವಹಿಸುತ್ತಿದ್ದಳು. ಅಲ್ದೇ, ಭರವಸೆ ಹೊಂದಿದ್ದ ವಿದ್ಯಾರ್ಥಿನಿ ಯಾವುದರ ಬಗ್ಗೆ ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಜೊತೆಗೆ ನಮ್ಮ ಶಾಲೆ ಶಿಕ್ಷಕರ ಮಾರ್ಗದರ್ಶನ ಸಹ ಸಹಕಾರಿಯಾಗಿದ್ದು, ಅಕ್ಷತಾಳ ಸಾಧನೆ ಖುಷಿ ತಂದಿದೆ.
ಜ್ಯೋತಿ ನಂದಿಮಠ, ಮುಖ್ಯೋಪಾದ್ಯಯರು, ಸರ್ಕಾರಿ ಆದರ್ಶ ವಿದ್ಯಾಲಯ
ಇನ್ನು ಶಿರಸಿಯ ಮಾರಿಕಾಂಭಾ ಶಾಲೆಯ ವಿದ್ಯಾರ್ಥನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ. 625ಕ್ಕೆ 625 ಅಂಕ ಪಡೆದು ಶೇಕಡ 100ರಷ್ಟು ಸಾಧನೆ ಮಾಡಿದ್ದಾಳೆ. ಇನ್ನು 11 ಮಂದಿ ವಿದ್ಯಾರ್ಥಿಗಳು 624 ಅಂಕ ಪಡೆದು 2ನೇ ಸ್ಥಾನ ಹಂಚಿಕೊಂಡಿದ್ದಾರೆ.