ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೇಂದ್ರ ಲೋಕಸೇವಾ ಆಯೋಗದ 2020ನೇ ಸಾಲಿನ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಗುಮ್ಮಟನಗರಿಯ ನೇತ್ರಾ ಮೇಟಿ ಅವರು 326ನೇ ರ್ಯಾಂಕ್ ಪಡೆದಿದ್ದಾರೆ.
ವಿವೇಕ ನಗರದ ನಿವಾಸಿ ನೇತ್ರಾ ಅವರು 7ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಬಾರಿ ಸಂದರ್ಶನದ ಮಟ್ಟಕ್ಕೆ ಹೋಗಿ ಬಂದಿದ್ದರು. ಈ ಬಾರಿ ಯಶಸ್ಸು ಸಿಕ್ಕಿದ್ದು ಖುಷಿಯಾಗಿದೆ ಎಂದಿದ್ದಾರೆ.
ಇನ್ನು ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಶಾಂತಪ್ಪ ಕುರುಬರ 2023ನೇ ಸಾಲಿನ ಪರೀಕ್ಷೆಯಲ್ಲಿ 644ನೇ ರ್ಯಾಂಕ್ ಪಡೆದಿದ್ದಾರೆ. ಇವರು 2016ರಲ್ಲಿ ಪಿಎಸ್ಐ ಆಗಿ ಆಯ್ಕೆ ಆಗಿದ್ದಾರೆ. ಇದರ ಜೊತೆಗೆ ಯುಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದರು.
8ನೇ ಪ್ರಯತ್ನದಲ್ಲಿ ಶಾಂತಪ್ಪ ಅವರಿಗೆ ಯಶಸ್ಸು ಸಿಕ್ಕಿದೆ. 5 ಬಾರಿ ಪ್ರಯತ್ನಗಳಲ್ಲಿ ವಿಫಲರಾಗಿದ್ದರು. 6 ಹಾಗೂ 7ನೇ ಬಾರಿ ಸಂದರ್ಶನದ ತನಕ ಹೋಗಿ ನಿರಾಸೆ ಅನುಭವಿಸಿದ್ದರು. ಆದರೆ, ಛಲ ಬಿಡದೆ ಪ್ರಯತ್ನ ಪಟ್ಟ ಪರಿಣಾಮ 8ನೇ ಬಾರಿಗೆ ಯಶಸ್ಸು ಸಾಧಿಸಿದ್ದಾರೆ.
ಪಿಯುಸಿ 2ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದರು. ಬಿ.ಎಸ್ಸಿಯಲ್ಲಿ ಶೇಕಡ 78ರಷ್ಟು ಅಂಕ ಪಡೆದಿದ್ದರು. ಇವರ ಸಾಧನೆಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.