ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜಕೀಯ ಸಂಘರ್ಷಗಳು ಜೋರಾಗುತ್ತವೆ. ಅದರಲ್ಲೂ ಇತ್ತೀಚೆಗೆ ಅಭಿವೃದ್ಧಿ ವಿಚಾರ ಬಿಟ್ಟು ಬರೀ ಜಾತಿ, ಧರ್ಮದ ಆಧಾರದ ಮೇಲೆ ಚರ್ಚೆ, ಮಾತು, ವಿವಾದ ಸೃಷ್ಟಿಸಿ ಚುನಾವಣೆ ನಡೆಸಲಾಗುತ್ತಿದೆ. ಟಿಪ್ಪು ಕೊಂದವರು ಎಂದು ಬಿಜೆಪಿ ನಾಯಕರು ಸೃಷ್ಟಿಸಿರುವ ಉರಿಗೌಡ, ದೊಡ್ಡ ನಂಜೇಗೌಡ ವಿಚಾರದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಬಹುಭಾಷಾ ನಟ ಕಿಶೋರ್ ಕಿಡಿ ಕಾರಿದ್ದಾರೆ.
ಇದು ಚುನಾವಣೆಯ ಕಾಲ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಎಂದೋ ರಾಜರ ಕಾಲದ ಹೆಸರಿನಲ್ಲಿ ರಾಜಕೀಯ ನಡೆಸಲಾಗುತ್ತಿದೆ. ಉರಿಗೌಡ, ನಂಜೇಗೌಡ ಸೃಷ್ಟಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯತ್ನವೇ? ಟಿಪ್ಪು ಕೊಂದವರು ಒಕ್ಕಲಿಗರು ಎಂದು ಹೇಳಿ ಒಬ್ಬೊರ ಮೇಲೆ ಒಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟಿಷರ ಪರವಾಗಿದ್ದರು ಎಂದು ಹೇಳಿ, ಮುಂದೆ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಹುನ್ನಾರವೇ? ಎಂದು ಪ್ರಶ್ನಿಸಿದ್ದಾರೆ.
ಮೊದಲು ಹಿಂದೂ ಮುಸ್ಲಿಂರು ಎಂದರು. ಗಾಂಧಿ ಕೊಂದರು. ರೈತರನ್ನು ಭಯೋತ್ಪಾದಕರೆಂದರು. ಧರ್ಮವೆಂದರು. ತಮಿಳರೆಂದರು, ಧರ್ಮವೆಂದರು. ದಲಿತರೆಂದರು. ಭಾಷೆಯಂದರು. ಇತಿಹಾಸ ತಿರುಚಿದರು. ಸುಳ್ಳು ಸುದ್ದಿ ಹರಡಿದರು. ಅಧಿಕಾರದ ಆಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿದರು ಅಂತಾ ತುಂಬಾ ತೀಕ್ಷಣವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಚುನಾವಣೆಯ ಕಾಲವಿದು ಎಚ್ಚರ ಎಂದಿದ್ದಾರೆ.