ವಿಜಯಪುರ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ರಾಜಕೀಯ ನಿವೃತ್ತಿಯನ್ನ ಘೋಷಣೆ ಮಾಡಿದ್ದಾರೆ. ಮುಂದಿನ ಸಾರಿ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತ್ನಾಡಿದ ಅವರು, ನನ್ನನ್ನು ಯಾರೂ ಖರೀದಿ ಮಾಡಿಲ್ಲ. ನಾನು ಜೆ.ಹೆಚ್ ಪಟೇಲ ಹಾಗೂ ಹೆಗಡೆ ಅವರ ಶಿಷ್ಯ. ಅವರಂತೆಯೇ ಗೌರವಯುತವಾಗಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತಾ ತಿಳಿಸಿದ್ದಾರೆ. 45 ವರ್ಷಗಳಿಂದ ಗೌರವದಿಂದಲೇ ರಾಜಕೀಯ ಮಾಡಿದ್ದೇನೆ. ಪಕ್ಷದ ಸಿದ್ಧಾಂತದಂತೆ ಕೆಲಸ ಮಾಡಿದ್ದೇನೆ. ಮುಂದಿನ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಅಂತಾ ಹೇಳುವ ಮೂಲಕ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಈ ಬಾರಿ ಅವರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಗುತ್ತೆ ಅಂತಾ ಹೇಳಲಾಗಿತ್ತು. ಆದ್ರೆ, ಅದು ಅವರಿಂದ ಕೈತಪ್ಪಿತು. ಈ ಬಗ್ಗೆ ನನ್ಗೆ ಯಾವುದೇ ಅಸಮಾಧಾನವಿಲ್ಲವೆಂದು ಈ ಹಿಂದೆ ಸಂಸದರು ಹೇಳಿದ್ರು. ಆದ್ರೆ, ವಿಜಯಪುರದಲ್ಲಿ ಹ್ಯಾಟ್ರಿಕ್ ಗೆಲುವು ಬಾರಿಸಿದ ಅವರಿಗೆ ಸಚಿವ ಸ್ಥಾನ ಸಿಗದೆ ಇರೋದು ಒಂದಿಷ್ಟು ಬೇಸರ ಮೂಡಿಸಿದ್ದು ಮಾತ್ರ ಸತ್ಯ.