ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಚಿರತೆ ತಾನು ಆಡಿದ್ದೆ ಆಟವಾಗಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಬೇಕೆಂದು ಹಲವು ರೀತಿಯಲ್ಲಿ ಕಸರತ್ತು ನಡೆಸಿದ್ದಾರೆ. ಆದರೆ, ಅದು ಮಾತ್ರ ಎಲ್ಲರಿಗೂ ಚೆಳ್ಳೆಹಣ್ಣು ತಿನ್ನಿಸುತ್ತಿದೆ.
ಚಿರತೆ ಹಾವಳಿಯಿಂದ ಈಗಾಗ್ಲೇ ಜಿಲ್ಲೆಯಲ್ಲಿ ವಿವಿಧ ಕಡೆ ಹಲವು ಬಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಜನರು ಆತಂಕದಲ್ಲಿದ್ದಾರೆ. ಇತ್ತ ಚಿರತೆ ಸಿಗದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಗಳು ಸದ್ದು ಮಾಡುತ್ತಿವೆ. ಬೆಳಗಾವಿ ಬಿಟ್ ಹೋಗಲ್ಲ, ಯಾರಪ್ಪಂದ್ ಬೆಳಗಾವಿ ನಂದೈತಿ, ಗಣೇಶ ಹಬ್ಬ ಮುಗಿಸ್ಕೊಂಡ್ ಹೋಗ್ತೀನಿ ಅನ್ನೋ ಲೈನ್ಸ್ ಸೇರಿದಂತೆ ಜೋಗಯ್ಯದಲ್ಲಿ ಶಿವಣ್ಣ ಹೇಳುವ ಡೈಲಾಗ್ ರೀತಿಯಲ್ಲೂ ಸಾಲುಗಳನ್ನು ಬರೆದು ಚಿರತೆ ಫೋಟೋ ಹಾಕಿರುವುದು ಸದ್ದು ಮಾಡುತ್ತಿದೆ.
ಇಷ್ಟು ಮಾತ್ರವಲ್ಲದೆ ಚಿರತೆಯ ಫೋಟೋ ಹಾಕಿ ಆಧಾರ್ ಕಾರ್ಡ್ ರೀತಿಯಲ್ಲಿ ಎಡಿಟ್ ಮಾಡಿರುವುದು ಸಹ ಸಖತ್ ಸೌಂಡ್ ಮಾಡುತ್ತಿದೆ. ಹೀಗೆ ಹಲವು ರೀತಿಯಲ್ಲಿ ಮೀಮ್ಸ್ ಹರಿದಾಡುವ ಮೂಲಕ, ಆತಂಕದ ನಡುವೆಯೂ ಜಿಲ್ಲೆಯ ಜನರು ಹಾಸ್ಯದ ಮೂಲಕ ರಂಜಿಸುತ್ತಿದ್ದಾರೆ.