ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್ ನಿಂದ ಎಚ್.ಡಿ ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಬೇಕು ಎನ್ನುತ್ತಿದ್ದಾರೆ. ಬಹಿರಂಗವಾಗಿ ಹಾಸನ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಹೇಳಿದ್ದಾರೆ. ಇದೆ ವಿಚಾರವಾಗಿ ಸಾಕಷ್ಟು ಮುಸುಕಿನ ಹಾಗೂ ಬಹಿರಂಗ ಜಟಾಪಟಿಗಳು ನಡೆದಿವೆ. ದೇವೇಗೌಡರ ಕಟುಂಬದಲ್ಲಿ ಹಾಸನ ಕ್ಷೇತ್ರದ ವಿಚಾರವಾಗಿ ತೆರೆ ಮರೆಯಲ್ಲಿ ಕದನ ನಡೆದಿದೆ.
ಶನಿವಾರ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ನಿಷ್ಠಾವಂತ ಕಾರ್ಯಕರ್ತರೆಲ್ಲ ನನ್ನ ಕುಟುಂಬ. ಕಾರ್ಯಕರ್ತರ ಅಭಿಪ್ರಾಯ ಪಡೆದು ಅವರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ಎಲ್ಲರೂ ರಾಜಕೀಯದಲ್ಲಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯರು. ಹಿರಿಯ ಪುತ್ರ ರೇವಣ್ಣ ಮಾಜಿ ಸಚಿವ, ಹಾಲಿ ಶಾಸಕರು. ಇವರ ಪತ್ನಿ ಭವಾನಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ. ಇವರ ಇಬ್ಬರು ಪುತ್ರರಲ್ಲಿ ಪ್ರಜ್ವಲ್ ರೇವಣ್ಣ ಹಾಲಿ ಸಂಸದರು. ಸೂರಜ್ ರೇವಣ್ಣ ಹಾಲಿ ವಿಧಾನ ಪರಿಷತ್ ಸದಸ್ಯರು. ಕುಮಾರಸ್ವಾಮಿ ಮಾಜಿ ಸಿಎಂ, ಹಾಲಿ ಶಾಸಕರು. ಇವರ ಪತ್ನಿ ಹಾಲಿ ರಾಮನಗರ ಶಾಸಕರು. ಇವರ ಪುತ್ರ ನಿಖಿಲ್ ಕಳೆದ ಬಾರಿ ಲೋಕಸಭಾ ಸ್ಪರ್ಧಿಸಿದ್ದರು. ಈ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ.
ನಿನ್ನೆ ಯಡಿಯೂರಪ್ಪ 130 ಸ್ಥಾನ ಗದ್ದೆ ಗೆಲ್ಲುತ್ತೇವೆ ಎಂದಿದ್ದಾರೆ. ಈ ಹಿಂದೆ ಕೆಜಿಪಿಗೆ ಹೋದಾಗ ಪ್ರಾಣ ಹೋದರೂ ಬಿಜೆಪಿಗೆ ಹೋಗಲ್ಲ ಅಂದಿದ್ದರು. ಈಗ ಜೀವ ಇರುವ ತನಕ ಬಿಜೆಪಿಯಲ್ಲೇ ಇರುತ್ತೇನೆ ಎನ್ನುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಗೆದ್ದ ಎತ್ತಿನ ಬಾಲ ಹಿಡಿಯುತ್ತೇನೆ ಎಂದಿದ್ದಾರೆ. ಅವರು ಸೋತ ಎತ್ತಿನ ಬಾಲ ಹಿಡಿಯಲು ಹೋಗುತ್ತಾರೆ ಎಂದು ಕುಟುಕಿದರು.