ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇ 28 ಭಾನುವಾರ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದಾರೆ. ಆದರೆ, ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದೆ. ದೇಶದ ಹಾಗೂ ಸಂಸತ್ತಿನ ಮುಖ್ಯಸ್ಥರಾಗಿರುವ ರಾಷ್ಟ್ರಪತಿ ಅವರಿಗೆ ಆಹ್ವಾನ ನೀಡದ ಮೋದಿ ನಡೆಯನ್ನು ಖಂಡಿಸಲಾಗುತ್ತಿದೆ.
ಅಂದು ಸಂಸತ್ ಭವನ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೂ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಕಡೆಗಣಿಸಲಾಯಿತು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಲಾಗಿದೆ ಎಂದು ಹಲವು ಪಕ್ಷಗಳು ವಾಗ್ದಾಳಿ ನಡೆಸಿವೆ. ಅಲ್ಲದೇ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
ಪ್ರಧಾನಿ ಮೋದಿ ನಡೆ ಸರ್ವಾಧಿಕಾರಿತನದಿಂದ ಕೂಡಿದೆ. ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಆಗ 20 ಸಾವಿರ ಕೋಟಿಯ ನೂತನ ಸಂಸತ್ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಈಗ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ಹಾಗೂ ವಿಧುವೆ ಅನ್ನೋ ಕಾರಣಕ್ಕೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಕಿಡಿ ಕಾರಲಾಗುತ್ತಿದೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್, ಎನ್ ಸಿಪಿ, ಸಮಾಜವಾದಿ ಪಕ್ಷ ಸೇರಿದಂತೆ 19 ರಾಜಕೀಯ ಪಕ್ಷಗಳು ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿವೆ. ಒಂದು ಕೆಟ್ಟ ಸಂಪ್ರದಾಯಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದು, ಇದಕ್ಕೆ ನಾವು ಸಾಕ್ಷಿ ಆಗುವುದಿಲ್ಲ ಎಂದಿದ್ದಾರೆ.