ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರೀತಿ ನಿರಾಕರಿಸಿದಳು ಅನ್ನೋ ಕಾರಣಕ್ಕೆ ಪಾಪಿಯೊಬ್ಬ ಕಳೆದ ಏಪ್ರಿಲ್ 28ರಂದು ಆಸಿಡ್ ದಾಳಿ ನಡೆಸಿದ್ದ. ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಇಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು.
ಪಶ್ಚಿಮ ವಿಭಾಗದ ಪೊಲೀಸರು ಸಾಕಷ್ಟು ಕಾಳಜಿ ವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಯಾವುದೇ ರೀತಿಯ ಸುಳಿವು ಸಿಗದಂತೆ ಆರೋಪಿ ಎಸ್ಕೇಪ್ ಆಗಿದ್ದ. ತಮಿಳುನಾಡಿನ ತಿರುವಣ್ಣಾಮಲೈನ ಆಶ್ರಮ ಸೇರಿದ್ದ. ಈತನ ಪತ್ತೆಗಾಗಿ ಪೊಲೀಸರು ಕರಪತ್ರ ಹಂಚಿದ್ದರು. ಆಗ ಸ್ಥಳೀಯರು ಸುಳಿವು ನೀಡಿದ್ದರು. ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ ಎಂದರು.
ಸಾರ್ವಜನಿಕರಿಗೆ, ನೆರೆಯ ರಾಜ್ಯದ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ ಪೊಲೀಸ್ ಆಯುಕ್ತರು, ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ ಮಾಡಿದ್ದಾರೆ.
ಆರೋಪಿ ನಾಗೇಶ್ ಹಾಗೂ ಯುವತಿ ಒಂದೇ ಬಿಲ್ಡಿಂಗ್ ನಲ್ಲಿ 7 ವರ್ಷಗಳಿಂದ ವಾಸವಾಗಿದ್ದರು. ಯುವತಿಗೆ ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಆಕೆ ನಿರಾಕರಿಸಿದ್ದಳು. ಯುವತಿ ಪಕ್ಕದ ಮನೆಯ ಸ್ನೇಹಿತನಿಂದ ಆಕೆಯ ಬಗ್ಗೆ ಕೆಲ ಮಾಹಿತಿ ಪಡೆದಿದ್ದ. ಅವಳು ಕೆಲಸ ಮಾಡುತ್ತಿದ್ದ ವಿಳಾಸ ಪಡೆದು ಹಿಂಬಾಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.