ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕುರಿತು 48 ಗಂಟೆಗಳ ಕಾಲ ಏನು ಹೇಳಲು ಆಗುವುದಿಲ್ಲವೆಂದು ವೈದ್ಯರು ಹೇಳಿದ್ದಾರೆ. ಭಾನುವಾರ ರಾತ್ರಿ ಸುಮಾರು 11.45ರ ವೇಳೆ ವ್ಯಕ್ತಿಗೆ ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ವೇಳೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನ ತಕ್ಷಣ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾದ ಹಲ್ಲೆ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಕುರಿತು ಏನು ಹೇಳಲು ಆಗುವುದಿಲ್ಲವೆಂದು ವೈದ್ಯರು ಹೇಳಿದ್ದು, ಸಾಕಷ್ಟು ಆತಂಕ ಮೂಡಿಸಿದೆ.
ವೈದ್ಯರು ಸತತ 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈ ವೇಳೆ ಹೃದಯ ಹಾಗೂ ಕತ್ತನ್ನ ಸಂಪರ್ಕಿಸುವ ನರಗಳು ತುಂಡಾಗಿದ್ದನ್ನ ಮರು ಜೋಡಿಸಲಾಗಿದೆ ಎನ್ನಲಾಗ್ತಿದ್ದು, ಸಧ್ಯಕ್ಕೆ ಅವರ ಆರೋಗ್ಯದ ಕುರಿತು ಏನು ಹೇಳಲು ಸಾಧ್ಯವಿಲ್ಲವೆಂದು ಹೇಳಲಾಗ್ತಿದೆ.
ಸುಮಾರು 24 ವರ್ಷದ ಫರ್ಹಾನ್ ಪಾಷಾ ಅನ್ನೋ ಯುವಕ ಹಲ್ಲೆ ಮಾಡಿದ್ದಾನೆ. ಗೌಸಿಯಾನಗರದ ಕೆ.ಎಂ ಪುರಂ ನಿವಾಸಿ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಆತನನ್ನ ಹಿಡಿದು ಪೊಲೀಸ್ರಿಗೆ ಒಪ್ಪಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿ ಒದಗಿಸಲಾಗಿದೆ. ಯಾರನ್ನೂ ಒಳಗೆ ಬಿಡುತ್ತಿಲ್ಲ.