ಪ್ರಜಾಸ್ತ್ರ ಅಪರಾಧ ಸುದ್ದಿ
ಶಿವಮೊಗ್ಗ: ಬಾರ್ ಮುಚ್ಚುವ ಸಮಯವಾಗಿದೆ ಎಂದಿದ್ದಕ್ಕೆ ಕ್ಯಾಷಿಯರ್ ಜೊತೆಗೆ ಮೂವರು ಜಗಳವಾಡಿದ್ದಾರೆ. ಹೀಗಾಗಿ ಆತ ಪೊಲೀಸರಿಗೆ ಫೋನ್ ಮಾಡಿ ಕರೆಸಿದ್ದ. ಇದರಿಂದ ಕೋಪಗೊಂಡ ಮೂವರು ಪೊಲೀಸರ ಎದುರೆ ಬಾರ್ ಕ್ಯಾಷಿಯರ್ ಕೊಲೆ ಮಾಡಿದ ಘಟನೆ ನಡೆದಿದೆ.
ಕ್ಯಾಷಿಯರ್ ಸಚಿನ್ ಕುಮಾರ್(27) ಮೃತ ಯುವಕನಾಗಿದ್ದಾನೆ. ಆಯನೂರ ತಾಂಡಾ ನಿವಾಸಿಗಳಾದ ನಿರಂಜನ್, ಸತೀಶ್ ಹಾಗೂ ಅಶೋಕ್ ನಾಯ್ಕ ಎಂಬುವವರು ಕೂಡಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನವರತ್ನ ಬಾರ್ ಅಸಿಸ್ಟೆಂಟ್ ಕ್ಯಾಷಿಯರ್ ಅರುಣ್ ಕುಮಾರ್ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ 10 ದಿನಗಳಿಂದ ಬಾರ್ ಬರುತ್ತಿದ್ದ ಈ ಮೂವರು, ಹಣ ಕೇಳಿದ ಸಚಿನ್ ಗೆ ನಿನಗೆ ಒಂದು ದಿನ ಇದೆ ಎಂದು ಬೆದರಿಕೆ ಹಾಕಿದ್ದರಂತೆ. ಭಾನುವಾರ ರಾತ್ರಿ 11.30ರ ಸಮಯದಲ್ಲಿ ಬಾರ್ ಮುಚ್ಚುವ ಸಮಯವಾಗಿದೆ. ಹೊರಗೆ ಬನ್ನಿ ಎಂದು ಹೇಳಿದ್ದಾನೆ. ಆದರೆ, ಅವರು ನಾವು ಇಲ್ಲೇ ಕುಡಿಯುತ್ತೇವೆ. ಏನು ಮಾಡ್ತೀಯಾ ಎಂದು ಗಲಾಟೆ ಮಾಡಿದ್ದಾರೆ. ಹೀಗಾಗಿ ಬಾರ್ ನವರು 112ಗೆ ಕರೆ ಮಾಡಿದ್ದಾರೆ. ಪೊಲೀಸರನ್ನು ಕರೆಸುತ್ತೀಯಾ ಎಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಚಾಕುವಿನಿಂದ ಎದೆಗೆ, ಪಕ್ಕೆಗೆ ಚುಚ್ಚಿದ್ದಾರೆ. ಅದಾಗಲೇ ರಾತ್ರಿ ಸುಮಾರು 12 ಗಂಟೆಯಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಚಿನ್ ಕುಮಾರ್ ಮೃತಪಟ್ಟಿದ್ದಾನೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.