ಬೇಸಿಗೆಯ ತಾಪ ಏರುತ್ತಿದೆ. ಒಂದ್ಕಡೆ ಕರೋನಾ ಇಡೀ ಮನುಷ್ಯನ ಬದುಕನ್ನ ಮೂರಾಬಟ್ಟಿ ಮಾಡಿದೆ. ಹೀಗಾಗಿ ತನ್ನ ಬಿಟ್ಟು ಇತರರ ಬಗ್ಗೆ ಯೋಚಿಸದೆ ಉಳಿದ ಪರಿಣಾಮ ನಮಗೆ ಈ ಸ್ಥಿತಿ. ಹೀಗಾಗಿ ಈಗ್ಲಾದ್ರೂ ಪ್ರಾಣಿ, ಪಕ್ಷಿಗಳತ್ತ ಗಮನ ಹರಿಸೋಣ. ಬೇಸಿಗೆಯಲ್ಲಿ ಬಾಯಾರಿಕೆಯಿಂದ ಸಾಯೋ ಎಷ್ಟೋ ಮೂಕಜೀವಗಳನ್ನು ಉಳಿಸೋಣ ಎನ್ನುತ್ತಾರೆ ತನುಜ ಎನ್ ಅವರು…
ನಿಶ್ಯಬ್ಧತೆ ಕರಗುತ್ತಿದೆ, ಇಂಪಾದ ಚಿಲಿಪಿಲಿ ಕಲರವ ಮನಸ್ಸಿಗೂ, ಹೃದಯಕೂ ಹಿತವೆನಿಸುತ್ತಿದೆ. ತನುಮನದಲ್ಲಿ ಪ್ರಶಾಂತತೆ ಆವರಿಸಿದೆ, ಹೊಂಬೆಳಕ ನೋಡಲು ಕಣ್ಣುಗಳು ಕಾತರಿಸಿವೆ..!
ಹೌದು! ಇದು ಮುಂಜಾನೆ!! ಆದರೆ ಇಂದಿನದಲ್ಲ! ನಮ್ಮ ಬಾಲ್ಯದ್ದು. ಅದರಲ್ಲೂ ನಮ್ಮ ಹಿರಿಯರ ದಿನಗಳ ಮುಂಜಾನೆ!! ಇಂದೇನಿದ್ದರೂ ಹಗಲು-ರಾತ್ರಿಯೆನ್ನದ ವಾಹನಗಳ, ಕಾರ್ಖಾನೆಗಳ ಕರ್ಕಶ. ರೋಷ-ಆವೇಶ-ದ್ವೇಷ!!! ನಮ್ಮಗಳ ‘ಪ್ರಕೃತಿ ಇರುವುದೇ ಮನುಷ್ಯನ ಸುಖ ಜೀವನಕ್ಕಾಗಿ’ ಎಂಬ ಅಹಂನಿಂದ ಹೀಗಾಗಿದೆ!
ಸರಿ! ಈಗ ಚಿಂತೆ, ವ್ಯಥೆ, ಆರೋಪ ಬದಿಗಿಡೋಣ! ನಾವೇನಾದರೂ ವಸಿ ಮಾಡೋಣ!! ಸುಮ್ಮನೆ ಗಮನದಲ್ಲಿರಲೆಂದು ಒಂದು ಸಮೀಕ್ಷಾ ಮಾಹಿತಿ, ಸದ್ಯ ಭೂಮಿಯ ಮೇಲಿರುವ ಪಕ್ಷಿಗಳಲ್ಲಿ 70%ರಷ್ಟು ತಿನ್ನಲು ಸಾಕಿರುವ ಕೋಳಿಗಳೇ! ಇನ್ನುಳಿದ 30%ದಷ್ಟು ಮಾತ್ರ ಹತ್ತು ಸಾವಿರಕ್ಕೂ ಮಿಗಿಲಾದ ವೈವಿಧ್ಯ ಪಕ್ಷಿಗಳು!!!
ಉಪಯೋಗಕ್ಕಿಲ್ಲದವೆಂಬ ಭಾವ ಬಿಸಾಕಿ ಸುಮ್ಮನೆ ಪಕ್ಷಿಗಳ ಮಹತ್ವ ನೋಡಿದರೆ ನಮಗೆ ಜೀವ ವೈವಿಧ್ಯತೆಯ ಮಹತ್ವ ಅರಿವಾಗುವುದು! ಹುಂ, ಪಕ್ಷಿಗಳು ಬೀಜ ಪ್ರಸರಣೆ ಮಾಡ್ತವೆ, ಬೆಳೆಗಳಲ್ಲಿ ಕೀಟ ನಿಯಂತ್ರಿಸ್ತವೆ, ಪರಾಗಸ್ಪರ್ಶ ಮಾಡ್ತವೆ, ಪಕ್ಷಿಗಳ ಹಿಕ್ಕೆ ಒಳ್ಳೇ ಗೊಬ್ಬರ, ಪ್ರಕೃತಿಯಲ್ಲಿ ಸಮತೋಲನ ಕಾಪಾಡ್ತವೆ, ಮನುಷ್ಯನ ಎಷ್ಟೋ ಸಂಶೋಧನೆಗಳಿಗೆ ಪಕ್ಷಿಗಳೇ ಪ್ರೇರಣೆ… ಹೀಗೆ ಪಟ್ಟಿ ಬೆಳೀತಾ ಹೋಗುತ್ತೆ!
ನೋಡಿ, ಈಗಾಗಲೇ ಬಿಸಿಲಿನ ಅಬ್ಬರ ಜೋರಾಗಿದೆ. ಮುಂದೆ ಭೀಕರ ಬೇಸಿಗೆ ದಿನಗಳಿವೆ. ನಾವು ಈಗ ಸ್ವಲ್ಪ ಎಚ್ಚರಗೊಂಡು ನಮ್ಮ ಮನೆಯಂಗಳದಲ್ಲಿ ಪಕ್ಷಿಗಳಿಗೆಂದು! ಕುಡಿಯಲು ನೀರಿಡೋಣ! ಹೀಗ್ ಮಾಡುದ್ರೆ ಹಸಿವು ಮತ್ತು ಬಾಯಾರಿಕೆಯಿಂದ ಸಾಯೋ ಎಷ್ಟೊ ಪಕ್ಷಿಗಳ ಪ್ರಾಣ ಉಳಿಸಬಹುದು! ಬನ್ನಿ ಪ್ರಕೃತಿ ಪ್ರೀತಿಸಿ ಎದೆಯೊಳಗೊಸಿ ಬಿಟ್ಕೊಳ್ಳೋಣ. ಚಿನ್ನು ಮುರುಕು ಪುಟಾಣಿಗಳನ್ನೂ ಪ್ರೇರೇಪಿಸೋಣ, ಚಿಲಿಪಿಲಿ ದನಿಗೆ ಕಿವಿಯಾಗೋಣ.!!
ಲೇಖಕರು: ತನುಜ ಎನ್