ಪ್ರಜಾಸ್ತ್ರ ಸುದ್ದಿ
ಸಿಂದಗಿ: ದೇಶದಲ್ಲಿ ಕಾಂಗ್ರೆಸ್ ಒಂದು ಮುಳುಗುತ್ತಿರುವ ಪಕ್ಷ. ರಾಜ್ಯದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜು ಹೇಳಿದ್ರು. ಪಟ್ಟಣದಲ್ಲಿ ಸೋಮವಾರ ನಡೆದ ಮಂಡಲ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತ್ನಾಡಿದ್ರು.
ಬಿಜೆಪಿಗೆ ಸ್ಪಷ್ಟವಾದ ಸಿದ್ಧಾಂತವಿದೆ. ಸಮರ್ಥ ನಾಯಕತ್ವವಿದೆ. ಶಿಸ್ತುಬದ್ಧವಾದ ಕಾರ್ಯಕರ್ತರಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳಿಗಿಂತ ಬಿಜೆಪಿ ಭಿನ್ನವಾಗಿ ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ಭಯೋತ್ಪಾದನೆ ನಿಲ್ಲಬೇಕು. ಶಾಂತಿ ನೆಲಸಬೇಕು. ಅದು ಭಾರತದ ನಾಯಕತ್ವದಲ್ಲಿ ಆಗಬೇಕು ಅನ್ನೋದು ಬಿಜೆಪಿಯ ಆಸೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ 7 ವರ್ಷಗಳಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದರು.
ಇನ್ನು ರಾಹುಲ ಗಾಂಧಿ ರಾಜಕೀಯದ ಬಫೂನ್ ಎಂದು ಟೀಕಿಸಿದ ಶಾಸಕ ಪಿ.ರಾಜು, ಚೀನಾದ ಸೈನಿಕರು ಗಡಿ ದಾಟುತ್ತಿದ್ದರೆ ರಾಹುಲ ಗಾಂಧಿ ಚೀನಾದೊಂದಿಗೆ ಗುಪ್ತ ಮಾತುಕತೆ ನಡೆಸುತ್ತಾರೆ ಎಂದು ಆರೋಪಿಸಿದರು. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಒಂದು ಮುಳುಗುತ್ತಿರುವ ಪಕ್ಷ. ಇದರಲ್ಲಿ ಡಿ.ಕೆ ಶಿವಕುಮಾರ ಒಂದ್ಕಡೆ, ಸಿದ್ದರಾಮಯ್ಯ ಮತ್ತೊಂದ್ಕಡೆ ಉಳಿದವರ ಇನ್ನೊಂದ್ಕಡೆ ಆಗುವ ಮೂಲಕ ಮನೆಯೊಂದು ಮೂರು ಬಾಗಿಲು ಆಗಿದೆ ಎಂದರು.
ಇದೇ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತ್ನಾಡಿ, ಕರೋನಾ, ನೆರೆ ಸಂದರ್ಭದಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದರು. ಬಿಜೆಪಿ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಸ್ವಾಗತ ಭಾಷಣ ಮಾಡಿದ್ರು. ಈ ವೇಳೆ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಶಿವರುದ್ರ ಬಾಗಲೋಟೆ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬೆಳಗಾವಿ ವಿಭಾಗದ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ನಿಂಗರಾಜ ಬಗಲೂರು, ಸುನಂದಾ ಯಂಪೂರೆ, ಮಾಧ್ಯಮ ಪ್ರಮುಖ ಸುದರ್ಶನ ಜಿಂಗಾಣಿ ಉಪಸ್ಥಿತರಿದ್ರು. ಮಂಡಲ ಕಾರ್ಯದರ್ಶಿ ಗುರು ತಳವಾರ ನಿರೂಪಿಸಿ ವಂದಿಸಿದ್ರು.