ಗ್ರಹಣದ ಟೈಂನಲ್ಲಿ ಒಂದಲ್ಲ ಒಂದು ವಿಚಿತ್ರ ಘಟನೆಗಳು ನಡೆಯುತ್ತವೆ. ಅವುಗಳಲ್ಲಿ ನೀರಿನಲ್ಲಿ ಒನಕೆ ನಿಲ್ಲುವುದು. ಅಂಗವಿಕಲ ಮಕ್ಕಳನ್ನ ಮಣ್ಣಿನಲ್ಲಿ ಹೂತು ನಿಲ್ಲಿಸುವುದು. ಹೀಗಾಗಿ ಮೂಢನಂಬಿಕೆಯ ಘಟನೆಗಳು ಇಂದಿಗೂ ನಡೆಯುತ್ತಿವೆ. ಇದಕ್ಕೆ ಸಾಕ್ಷಿಯಾಗಿ ವಿಜಯಪುರ, ಕಲಬುರಗಿ ಹಾಗೂ ಜಮಖಂಡಿಯಲ್ಲಿ ಕೆಲ ಘಟನೆಗಳು ಸಾಕ್ಷಿಯಾಗಿವೆ.
ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದಲ್ಲಿ ತಾಮ್ರದ ತಟ್ಟೆಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿಯೂ ಒನಕೆ ನಿಲ್ಲಿಸಲಾಗಿದೆ. ಕಲಬುರಗಿ ಜಿಲ್ಲೆಯ ಐನಾಪೂರ ಗ್ರಾಮದಲ್ಲಿಯೂ ನೀರಿನಲ್ಲಿ ಒನಕೆಯನ್ನ ನಿಲ್ಲಿಸಲಾಗಿದೆ. ನೀರಿನಲ್ಲಿ ಹೀಗೆ ಒನಕೆ ನಿಂತ್ರೆ ಗ್ರಹಣ ಹಿಡಿದಿದೆ. ಅದು ನಿಲ್ಲದೆ ಬಿದ್ರೆ ಗ್ರಹಣ ಬಿಟ್ಟಿದೆ ಅನ್ನೋದು ಜನರ ನಂಬಿಕೆಯಾಗಿದೆ.
ಮಣ್ಣಲ್ಲಿ ಅಂಗವಿಕಲರನ್ನ ನಿಲ್ಲಿಸುವುದು ಯಾರೋ ಮಾಡಿಕೊಂಡು ಬಂದಿದ್ದನ್ನ ಅನುಕರಿಸುವುದಾಗಿದೆ. ಇದರಿಂದ ಯಾವುದೇ ಲಾಭವಿಲ್ಲ. ಎಲ್ಲವನ್ನೂ ವೈಜ್ಞಾನಿಕವಾಗಿ ಉತ್ತರ ಹುಡುಕಲು ಆಗುವುದಿಲ್ಲ. ಇನ್ನು ನೀರಿನಲ್ಲಿ ಒನಕೆ ನಿಲ್ಲುವುದು ವಿಶೇಷವೇನಲ್ಲ. ಯಾಕಂದರೆ, ಒಂದು ಕಡೆ ಅದು ಭಾರವಾಗಿರುತ್ತೆ. ಇನ್ನೊಂದ ಕಡೆ ಇರುವುದಿಲ್ಲ. ಹೀಗಾಗಿ ಅದು ನಿಲ್ಲುತ್ತೆ. ನೀರು ಮಾತ್ರವಲ್ಲ. ನೆಲದ ಮೇಲೆಯೂ ನಿಲ್ಲುತ್ತೆ.
ಕೊಳ್ಳೇಗಾಲ ಶರ್ಮಾ, ಖ್ಯಾತ ವಿಜ್ಞಾನ ಲೇಖಕರು , ಮೈಸೂರು
ಇನ್ನು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅಂಗವಿಕಲ ಮಕ್ಕಳನ್ನ ಮಣ್ಣಿನಲ್ಲಿ ಹೂತು ನಿಲ್ಲಿಸಲಾಗುತ್ತೆ. ಕುತ್ತಿಗೆವರೆಗೂ ಗುಂಡಿ ತೆಗೆದು ಅದರಲ್ಲಿ ಅವರನ್ನ ನಿಲ್ಲಿಸಿ ಮಣ್ಣು ಹಾಕಿ ನಿಲ್ಲಿಸಲಾಗುತ್ತೆ. ಗ್ರಹಣದ ಸಮಯದಲ್ಲಿ ಹೀಗೆ ಮಾಡುವುದ್ರಿಂದ ಕಾಲು ಸರಿಯಾಗುತ್ತೆ ಅನ್ನೋ ನಂಬಿಕೆ.
ಕಲಬುರಗಿಯ ಹೊರವಲಯ ತಾಜ್ ಸುಲ್ತಾನ್ ಪುರ್ ಗ್ರಾಮದಲ್ಲಿ ಕಂಕಣ ಸೂರ್ಯಗ್ರಹಣ ಹಿನ್ನಲೆ, ಗ್ರಹಣ ಮುಗಿಯುವವರೆಗೆ ಮಕ್ಕಳನ್ನ ತಿಪ್ಪೆಯಲ್ಲಿ ಮುಚ್ಚಿಟ್ಟಿದ್ದಾರೆ. ಗ್ರಹಣ ಮುಗಿದ ನಂತರ ಮಕ್ಕಳನ್ನ ಮೇಲೆ ತೆಗೆಯುತ್ತಾರೆ.
ಅಂಗವಿಕಲ ಮಕ್ಕಳನ್ನ ಹೀಗೆ ಗುಂಡಿಯಲ್ಲಿ ಹೂತು ನಿಲ್ಲಿಸುವುದು ಮಕ್ಕಳ ಹಕ್ಕುಗಳ ವಿರೋಧವಾಗುತ್ತೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿ ಹೆಚ್ಚಾಗಲು ಕಾರಣ, ಶೈಕ್ಷಣಿಕವಾಗಿ ಹಿಂದುಳಿದಿರುವುದು. ಇದು ತಪ್ಪು. ಇದರಿಂದ ಯಾವುದೇ ಉಪಯೋಗಿವಲ್ಲ ಅನ್ನೋ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ಈ.ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು
ಇನ್ನು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಅರ್ಜುಣಗಿಯಲ್ಲಿಯೂ 24 ವರ್ಷದ ಪಪ್ಪು ಮುಲ್ಲಾ ಅನ್ನೋ ಅಂಗವಿಕಲ ಯುವಕನನ್ನ ಗುಂಡಿಯಲ್ಲಿ ನಿಲ್ಲಿಸಿ ಕುತ್ತಿಗೆವರೆಗೂ ಮಣ್ಣನ್ನ ಹಾಕಿ ನಿಲ್ಲಿಸಲಾಗಿದೆ. ನಮ್ಮ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಗೊತ್ತಿಲ್ಲ. ಯಾರೂ ಮಾಡಿದ್ದನ್ನ ಹಿಂದುಮುಂದು ನೋಡದೆ ಕುರುಡಾಗಿ ಅನುಕರಿಸ್ತಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಿದೆ.