ಸಿಂದಗಿ: ತಾಲೂಕಿನ ನಾಗರಹಳ್ಳಿ ಗ್ರಾಮದ ನಾನಾಗೌಡ ಪಾಟೀಲ ಎಂಬುವರ ತೋಟದಮನೆಯ ಬಸವ ಚೈತನ್ಯ ಫಾರ್ಮ್ ನಲ್ಲಿ ಕಂಕಣ ಸೂರ್ಯ ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಹಾಗೂ ವಿಚಾರಗೋಷ್ಠಿ ನಡೆಸುವ ಮೂಲಕ, ಮೌಢ್ಯದ ವಿರುದ್ಧ ಸಂದೇಶ ಸಾರಲಾಯ್ತು. ಈ ವೇಳೆ ಹಲವು ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನ ಭಾಗವಹಿಸಿ ಗ್ರಹಣ ವೀಕ್ಷಿಸುತ್ತಲೆ ಉಪಹಾರ ಸೇವನೆ ಮಾಡಿದ್ರು.
ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಖ್ಯಾತ ಕಾಮಿಡಿ ನಟ ರಾಜು ತಾಳಿಕೋಟಿ, ಭಕ್ತಿಯಿಂದ ನಾವು ಮಾಡುವ ನಿಸ್ವಾರ್ಥ ಸೇವೆಯೇ ನಿಜವಾದ ಕಾಯಕವೆಂದು ನಂಬಿದ್ದೇನೆ. ಒಳ್ಳೆಯದನ್ನ ಮಾಡುತ್ತೇನೆ. ಕೆಟ್ಟದ್ದನ್ನು ಮಾಡಲಾರೆ ಅಂತಾ ಹೇಳಿದ್ರು. ಬಸವ ಸಂದೇಶ ಸಾರಿದ ಅವರು ಸ್ವರಚಿತ ಕವನ ವಾಚಿಸುವ ಮೂಲಕ ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದ್ರು.
ಪ್ರಾಧ್ಯಾಪಕ ಬಿ.ಎನ್ ಪಾಟೀಲ ಮಾತ್ನಾಡಿ, ಪುರೋಹಿತಶಾಹಿಗಳು ಮೂಢನಂಬಿಕೆಯನ್ನ ಜನರಲ್ಲಿ ಮೂಡಿಸಿದ್ರು. ಹೀಗಾಗಿ ದೇವರನ್ನ ಸೃಷ್ಟಿಸಲಾಯ್ತು ಅಂತಾ ಹೇಳಿದ್ರು. ಎಲ್ಲಿಯವರೆಗೆ ಪುರೋಹಿತಶಾಹಿಗಳ ಅಂತ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಸಾಮಾಜಿಕ ದಬ್ಬಾಳಿಕೆ ನಿಲ್ಲುವುದಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇದೆ ವೇಳೆ ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ ನಡೆಸಲಾಯ್ತು.
ಆಯೋಜಿಕರಾದ ಚಿತ್ರದುರ್ಗದ ಮುರುಘಾಮಠದ ನಿರ್ದೇಶಕ ಶರಣ ನಾನಾಗೌಡ ಪಾಟೀಲ ನಾಗರಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದ್ರು. ಬಾಗಪ್ಪಗೌಡ ಪಾಟೀಲ ಆಹೇರಿ, ಸತ್ತಾಪುರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ರು. ಪ್ರಭು ಬಿರಾದಾರ ನಿರೂಪಿಸಿದ್ರು. ಮಲ್ಲಪ್ಪ ನಿಂಬರಗಿ ವಂದನಾರ್ಪಣೆ ಮಾಡಿದ್ರು.