ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಇದೆ ಎಂದು ಘೋಷಿಸಲಾಗಿದೆ. ಹೀಗಾಗಿ ಶುಕ್ರವಾರ ಕೇಂದ್ರದಿಂದ ಬರ ಅಧ್ಯಯನ ತಂಡ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲಕುಪ್ಪಿ ಗ್ರಾಮಕ್ಕೆ ಬಂದಿದೆ. ಈ ವೇಳೆ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಅಧ್ಯಯನ ತಂಡದ ಅಧಿಕಾರಿಗಳು ಸಮಸ್ಯೆಯನ್ನು ತಿಳಿದುಕೊಂಡು ಸವದತ್ತಿ ತಾಲೂಕಿನ ಚಚಡಿಯತ್ತ ಹೊರಟಿದ್ದಾಗ ರೈತ ಅಪ್ಪಾಸಾಹೇಬ ಲಕ್ಕುಂಡಿ ಕೀಟನಾಶಕದ ಬಾಟಲ್ ಹಿಡಿದುಕೊಂಡು ಬಂದು ಆತ್ಮಹತ್ಯೆಗೆ ಯತ್ನಿಸಿದರು.
40 ಎಕರೆಯಲ್ಲಿ ಶೇಂಗಾ, ಸೋಯಾಬಿನ್, ಹುರುಳಿ ಬೆಳೆದಿದ್ದೇನೆ. ಮಳೆಯಿಲ್ಲದೆ ಬೆಳೆ ಹಾಳಾಗಿದೆ. ರೈತರ ಸಮಸ್ಯೆಯನ್ನು ಸರ್ಕಾರ ಕೇಳುತ್ತಿಲ್ಲ. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಸರ್ಕಾರ ರೈತರ ಸಮಸ್ಯೆ ಕೇಳಬೇಕು ಅಂತಾ ಒತ್ತಾಯಿಸಿದರು.